ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಸುರಿದ ಭಾರೀ ಮಳೆಯ ಪರಿಣಾಮ ವರ್ತೂರು ಕೆರೆಯಲ್ಲಿ ಮತ್ತೆ ನೊರೆಗಳು ಉದ್ಭವವಾಗಿವೆ. ಇದರಿಂದಾಗಿ ಸುತ್ತಮುತ್ತ ನೊರೆ ಕಾಟದಿಂದಾಗಿ ಸಾರ್ವಜನಿಕರು ಹಾಗೂ ವಾಹನ ಸವಾರರ ಸಂಚಾರಕ್ಕೆ ಅಡ್ಡಿ ಉಂಟಾಗಿದೆ.
ಕಳೆದ ಒಂದು ವಾರದಿಂದ ಸುರಿದ ಧಾರಾಕಾರ ಮಳೆಯಿಂದಾಗಿ ನಗರದ ತಗ್ಗುಪ್ರದೇಶಗಳಿಗೆ ನೀರು ನುಗ್ಗಿ ಜಲಾವೃತಗೊಂಡಿದ್ದು. ಹಲವಾರು ಮರಗಳು ಧರೆಗುರುಳಿವೆ ಇದರ ನಡುವೆ ಬೆಳ್ಳಂದೂರು ಕೆರೆಯಲ್ಲಿ ಕಾಣಿಸಿಕೊಂಡಿದ್ದ ನೊರೆ ಸಮಸ್ಯೆ ಈಗ ವರ್ತೂರು ಕೆರೆಯಲ್ಲೂ ಕಾಣಿಸಿಕೊಂಡಿದ್ದು ಜನರ ಆತಂಕ ಇಮ್ಮಡಿಗೊಳಿಸಿದೆ. ಕೆರೆಯಿಂದ ರಾಶಿ, ರಾಶಿ ವಿಷಕಾರಿ ರಾಸಾಯನಿಕ ನೊರೆ ದೊಡ್ಡ ಪ್ರಮಾಣದಲ್ಲಿ ವೈಟ್ ಫೀಲ್ಡ್ ಮುಖ್ಯರಸ್ತೆ ಮೇಲೆ ಹಾರಿ ಬರುತ್ತಿದೆ. ಇದರಿಂದಾಗಿ ವಾಹನ ಸವಾರರು, ಪ್ರಯಾಣಿಕರಿಗೆ ತೊಂದರೆಯಾಗುತ್ತಿದೆ.
ಮೊನ್ನೆಬಂದ ಬಿರುಗಾಳಿ ಸಹಿತ ಮಳೆಗೆ ಕೆರೆಗೆ ಮೆಷ್ ಹಾಕಲು ಬಳಸಿದ ಕಂಬಗಳು ಕಿತ್ತು ಹೋಗಿವೆ. ಹೀಗಾಗಿ ನೊರೆ ನೇರವಾಗಿ ರಸ್ತೆಗೆ ಬಂದು ಬೀಳುತ್ತಿದೆ. ಗಾಳಿಬಂದಾಗಲೆಲ್ಲ ನೊರೆಗಳು ಮನೆಗಳಿಗೆವ್ ನುಗ್ಗುತ್ತಿವೆ. ನೊರೆ ಜತೆಗೆ ಬರುವ ದುರ್ವಾಸನೆ ಸೊಳ್ಳೆಕಾಟಗಳು ಕೂಡ ಹೆಚ್ಚಾಗಿವೆ.