Select Your Language

Notifications

webdunia
webdunia
webdunia
webdunia

ದೆಹಲಿ ತೊರೆದು ಹರಿಯಾಣ ತಂಡ ಸೇರಿದ ಸೆಹ್ವಾಗ್

ದೆಹಲಿ ತೊರೆದು ಹರಿಯಾಣ ತಂಡ ಸೇರಿದ ಸೆಹ್ವಾಗ್
ಫರಿದಾಬಾದ್ , ಸೋಮವಾರ, 24 ಆಗಸ್ಟ್ 2015 (11:25 IST)
ಸ್ಪೋಟಕ ಬ್ಯಾಟ್ಸಮನ್  ವೀರೇಂದ್ರ ಸೆಹ್ವಾಗ್ ಮುಂದಿನ ದೇಶಿ ಋತುವಿನಲ್ಲಿ ತವರು ದೆಹಲಿ ತಂಡದ ಬದಲು ಹರಿಯಾಣ ತಂಡದ ಪರ ಆಡಲು ನಿರ್ಧರಿಸಿದ್ದಾರೆ. ದೆಹಲಿ ತಂಡದಲ್ಲಿ ಯುವ ಆಟಗಾರರಿಗೆ ಅವಕಾಶ ಕಲ್ಪಿಸಲು ಸೆಹ್ವಾಗ್ ಈ ನಿರ್ಧಾರಕ್ಕೆ ಬಂದಿದ್ದಾರೆ ಎನ್ನಲಾಗುತ್ತಿದೆ.

1997–98ರಿಂದ ಇಲ್ಲಿಯವರೆಗೆ ಒಟ್ಟು 18 ಋತುಗಳಲ್ಲಿ ಅವರು ದೆಹಲಿ ತಂಡವನ್ನು  ಪ್ರತಿನಿಧಿಸಿದ್ದರು. ‘ಕೆಲವು ದಿನಗಳ ಹಿಂದೆ ದೆಹಲಿ ತಂಡವನ್ನು ಬಿಡುವುದಾಗಿ ಅವರು ಡಿಡಿಸಿಎಗೆ ತಿಳಿಸಿದ್ದರು.  ಇದೀಗ ಅವರು ಹರಿಯಾಣ ತಂಡವನ್ನು ಸೇರಿದ್ದಾರೆ’ ಎಂದು ಹರಿಯಾಣ ಕ್ರಿಕೆಟ್ ಸಂಸ್ಥೆ (ಎಚ್‌ಸಿಎ) ಕಾರ್ಯದರ್ಶಿ ಅನಿರುದ್ಧ್ ಚೌಧರಿ ತಿಳಿಸಿದ್ದಾರೆ.
 
‘ನಮ್ಮ ತಂಡಕ್ಕೆ ಸೆಹ್ವಾಗ್ ಆಗಮಿಸಿರುವುದರಿಂದ ನಮ್ಮ ರಾಜ್ಯದ ಕ್ರಿಕೆಟ್‌ ಗೌರವ ದುಪ್ಪಟ್ಟಾದಂತಾಗಿದೆ. ನಮಗೆ ತುಂಬಾ ಸಂತೋಷವಾಗಿದೆ’ ಎಂದು ಚೌಧರಿ ಹೇಳಿದ್ದಾರೆ.
 
‘ಮುಂಬರುವ ದೇಶಿ ಕ್ರಿಕೆಟ್ ಋತುವಿನಲ್ಲಿ ಹರಿಯಾಣ ತಂಡವನ್ನು ಪ್ರತಿನಿಧಿಸಲು ಕಾತರದಿಂದಿದ್ದೇನೆ. ಈ ತಂಡದಲ್ಲಿ ಬಹಳಷ್ಟು ಯುವ ಆಟಗಾರರು ಇದ್ದು, ಅವರೊಂದಿಗೆ ನನ್ನ ಅನುಭವವನ್ನು ಹಂಚಿಕೊಳ್ಳಲು ಮತ್ತು ತಂಡವನ್ನು ಮತ್ತಷ್ಟು ಬಲಪಡಿಸುವ ಅವಕಾಶ ಇದೆ’ ಎಂದು 36 ವರ್ಷದ ಸೆಹ್ವಾಗ್ ತಿಳಿಸಿದ್ದಾರೆ.
 
ಹಲವಾರು ರಾಜ್ಯ ಕ್ರಿಕೆಟ್ ಸಂಸ್ಥೆಗಳು ಸೆಹ್ವಾಗ್‌ರನ್ನು ಸಂಪರ್ಕಿಸಿ, ತಮ್ಮ ರಾಜ್ಯದ ಪರ ಆಡುವಂತೆ ಅಹ್ವಾನ ನೀಡಿದ್ದರು. ಆದರೆ ಸೆಹ್ವಾಗ್ ಹರಿಯಾಣ ತಂಡವನ್ನು ಆಯ್ದುಕೊಂಡಿದ್ದಾರೆ.
 
ವೀರೇಂದ್ರ ಸೆಹ್ವಾಗ್ ಭಾರತೀಯ ಕ್ರಿಕೆಟ್ ಕಂಡ ಅತ್ಯಂತ ಯಶಸ್ವಿ ಆರಂಭಿಕ ಬ್ಯಾಟ್ಸ್‌ಮನ್‌ಗಳಲ್ಲೊಬ್ಬರಾಗಿದ್ದು,  ಭಾರತದ 104 ಟೆಸ್ಟ್, 251 ಏಕದಿನ ಮತ್ತು 19 ಟಿ20 ಪಂದ್ಯಗಳನ್ನಾಡಿದ್ದಾರೆ. ಮೂರೂ ಪ್ರಕಾರಗಳಲ್ಲಿ ಒಟ್ಟಾರೆ 17 ಸಾವಿರಕ್ಕೂ ಹೆಚ್ಚು ರನ್‌ನ್ನು ಅವರು ಗಳಿಸಿದ್ದಾರೆ.
 
1997-98ರಲ್ಲಿ ಪ್ರಥಮ ದರ್ಜೆ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ್ದ ಸೆಹ್ವಾಗ್, ಕಳೆದ 18 ವರ್ಷಗಳಿಂದ ದೆಹಲಿ ಪರ ಆಡುತ್ತಿದ್ದರು. ಕಳೆದ ಬಾರಿಯ ರಣಜಿ ಟ್ರೋಫಿಯಲ್ಲಿ 8 ಪಂದ್ಯಗಳಿಂದ 51.63ರ ಸರಾಸರಿಯಲ್ಲಿ 568 ರನ್ ಕಲೆ ಹಾಕಿದ್ದರು.

Share this Story:

Follow Webdunia kannada