ಮುಂಬೈ: ವಿರಾಟ್ ಕೊಹ್ಲಿ ಚಾಂಪಿಯನ್ಸ್ ಟ್ರೋಫಿಯ ಕಳೆದೆರಡು ಪಂದ್ಯಗಳಿಗೆ ರವಿಚಂದ್ರನ್ ಅಶ್ವಿನ್ ರನ್ನು ಆಡಿಸದೇ ಇದ್ದಿದ್ದಕ್ಕೆ ತಂಡದ ಸಮತೋಲನದ ನೆಪ ಹೇಳಿದ್ದರು. ಅಸಲಿಗೆ ಅಶ್ವಿನ್ ಆಯ್ಕೆಯಾಗುವುದು ಸ್ವತಃ ಕೊಹ್ಲಿಗೆ ಇಷ್ಟವಿರಲಿಲ್ಲವೇ?!
ಹಾಗೊಂದು ಸುದ್ದಿ ಹರಿದಾಡುತ್ತಿದೆ. ಚಾಂಪಿಯನ್ಸ್ ಟ್ರೋಫಿಗಾಗಿ ತಂಡದ ಆಯ್ಕೆ ಮಾಡುವಾಗ ಅಶ್ವಿನ್ ಬೇಡ. ಅವರ ಬದಲಿಗೆ ಯಜುವೇಂದ್ರ ಚಾಹಲ್ ಮತ್ತು ಶಹಬಾಜ್ ನದೀಮ್ ಪರ ಕೊಹ್ಲಿ ಬ್ಯಾಟ್ ಮಾಡಿದ್ದರಂತೆ.
ಆದರೆ ಆಯ್ಕೆ ಸಮಿತಿ ಹಿರಿಯ ಸ್ಪಿನ್ನರ್ ನನ್ನೇ ಆಯ್ಕೆ ಮಾಡಿತು ಎಂದು ಬಿಸಿಸಿಐ ಮೂಲಗಳು ಹೇಳಿಕೊಳ್ಳುತ್ತಿವೆ. ಪಾಕ್ ವಿರುದ್ಧ ಸುಲಭ ಗೆಲುವು ಕಂಡ ಮೇಲೆ ಕೊಹ್ಲಿ ತಮ್ಮ ನಿರ್ಧಾರವೇ ಸರಿ ಎಂಬ ಭಾವನೆಯಲ್ಲಿದ್ದರು.
ಆದರೆ ಲಂಕಾ ಬ್ಯಾಟ್ಸ್ ಮನ್ ಗಳು ಭಾರತೀಯ ಬೌಲಿಂಗ್ ದಾಳಿಯನ್ನು ಇನ್ನಿಲ್ಲದಂತೆ ಪುಡಿಗಟ್ಟಿದ್ದು ನೋಡಿ ಕೊಹ್ಲಿಗೆ ನಿರಾಸೆಯಾಗಿದೆ. ಹೀಗಾಗಿ ಇಂದಿನ ಪಂದ್ಯಕ್ಕೆ ಅಶ್ವಿನ್ ರನ್ನು ಕಣಕ್ಕಿಳಿಸುವ ಸಾಧ್ಯತೆ ಇದೆ ಎನ್ನಲಾಗಿದೆ.