ಭಾರತ ಕ್ರಿಕೆಟ್ ತಂಡದ ವೇಗದ ಬೌಲರ್, ಪ್ರವೀಣ್ ಕುಮಾರ್ ಅವರ ಚಿನ್ನದ ಸರ ಕಳುವಾಗಿರುವ ಘಟನೆ ನಾಗ್ಪುರದಲ್ಲಿ ನಡೆದಿದೆ.
ನಾಗ್ಪುರದ 'ವಿದರ್ಭ ಕ್ರಿಕೆಟ್ ಅಸೋಸಿಯನ್’ನ ಡ್ರೆಸಿಂಗ್ ರೂಮ್’ನಲ್ಲಿ ಈ ಘಟನೆ ನಡೆದಿದೆ. ಬಂಗಾರದ ಈ ಚೈನ್ 8 ಲಕ್ಷ ರೂಪಾಯಿ ಬೆಲೆ ಬಾಳುತ್ತಿತ್ತು ಎಂದು ಹೇಳಲಾಗುತ್ತಿದೆ.
ವಿಜಯ್ ಹಜಾರೆ ಟ್ರೋಫಿಯಲ್ಲಿ ಉತ್ತರಪ್ರದೇಶದ ಪರ ಆಡುತ್ತಿರುವ ಪ್ರವೀಣ್ ರಾಜಸ್ತಾನ ವಿರುದ್ದದ ಪಂದ್ಯಕ್ಕೂ ಮೊದಲು ಪ್ರವೀಣ್ ತಾವು ಕೊರಳಲ್ಲಿ ಧರಿಸಿದ್ದ ಸರವನ್ನು ಡ್ರೆಸಿಂಗ್ ರೂಮ್ನಲ್ಲಿದ್ದ ಕುರ್ಚಿ ಮೇಲೆ ತೆಗೆದಿಟ್ಟಿದ್ದರು. ಅದನ್ನು ಅಲ್ಲೇ ಮರೆತು ಹೋದ ಅವರು ಮ್ಯಾಚ್ ಮುಗಿದ ಬಳಿಕ ಮರೆತಿದ್ದ ಸರವನ್ನು ತೆಗೆದುಕೊಂಡು ಬರುವಂತೆ ಸಿಬ್ಬಂದಿಗಳ ಬಳಿ ಹೇಳಿದ್ದಾರೆ. ಆದರೆ ಸರ ಅವರು ಇಟ್ಟ ಸ್ಥಳದಲ್ಲಿರಲಿಲ್ಲ.
ಈ ಕುರಿತು ಪ್ರಕರಣ ದಾಖಲಾಗಿದ್ದು ಪೊಲೀಸರು ತನಿಖೆ ಕೈಗೊಂಡಿದ್ದಾರೆ.