ಬಿಸಿಸಿಐಯನ್ನು ನೀರಿನ ಬಿಕ್ಕಟ್ಟು ದುಃಸ್ವಪ್ನದಂತೆ ಕಾಡುತ್ತಿದ್ದು, ಐಪಿಎಲ್ ಪಂದ್ಯಗಳನ್ನು ಬರಪೀಡಿತ ರಾಜ್ಯದಲ್ಲಿ ನಡೆಯಲು ಅವಕಾಶ ನೀಡಿದ ಕ್ರಮವನ್ನು ರಾಜಸ್ಥಾನ ಹೈಕೋರ್ಟ್ ಟೀಕಿಸಿದೆ. ಕಳೆದ ವಾರ, ಬಾಂಬೆ ಹೈಕೋರ್ಟ್ ಮೇನಲ್ಲಿ ನಡೆಯುವ ಎಲ್ಲಾ ಐಪಿಎಲ್ ಪಂದ್ಯಗಳನ್ನು ನೀರಿನ ಬಿಕ್ಕಟ್ಟು ಇರುವ ಹಿನ್ನೆಲೆಯಲ್ಲಿ ಮಹಾರಾಷ್ಟ್ರದ ಹೊರಗೆ ಸ್ಥಳಾಂತರಿಸುವಂತೆ ಸೂಚಿಸಿತ್ತು.
ಆದಾಗ್ಯೂ ಬಾಂಬೆ ಹೈಕೋರ್ಟ್ ರೈಸಿಂಗ್ ಪುಣೆ ಸೂಪರ್ಜೈಂಟ್ಸ್ ಮತ್ತು ಹಾಲಿ ಚಾಂಪಿಯನ್ಸ್ ಮುಂಬೈ ಇಂಡಿಯನ್ಸ್ ನಡುವೆ ಮೇ ಒಂದರಂದು ಪಂದ್ಯ ನಡೆಸಲು ಬಿಸಿಸಿಐಗೆ ಅವಕಾಶ ನೀಡಿದೆ.
ಆದರೆ ರಾಜಸ್ಥಾನ ಹೈಕೋರ್ಟ್ ರಾಜ್ಯಸರ್ಕಾರಕ್ಕೆ, ಬಿಸಿಸಿಐಗೆ ರಾಜ್ಯದಲ್ಲಿ ಪಂದ್ಯಗಳನ್ನು ನಡೆಸುವ ಯುಕ್ತಾಯುಕ್ತತೆ ಕುರಿತು ನೋಟಿಸ್ ನೀಡಿದೆ. ಮುಂಬೈ ಇಂಡಿಯನ್ಸ್ ಜೈಪುರದ ಸವಾಯ್ ಮಾನ್ಸಿಂಗ್ ಸ್ಟೇಡಿಯಂ ಅನ್ನು ತವರು ನೆಲವಾಗಿ ಆಯ್ಕೆ ಮಾಡಿತ್ತು.
ರಾಜ್ಯದಲ್ಲಿ ಮಹಾರಾಷ್ಟ್ರಕ್ಕಿಂತ ಬರಪರಿಸ್ಥಿತಿ ಕೆಟ್ಟದಾಗಿರುವಾಗ ರಾಜಸ್ಥಾನವೇಕೆ ಐಪಿಎಲ್ ಪಂದ್ಯಗಳಿಗೆ ಆತಿಥ್ಯ ವಹಿಸಬೇಕು ಎಂದು ಹೈಕೋರ್ಟ್ ಖಾರವಾಗಿ ಪ್ರಶ್ನಿಸಿದೆ. ಕೋರ್ಟ್ ಮುಂದಿನ ವಾರ ಈ ವಿಷಯವನ್ನು ವಿಚಾರಣೆಗೆ ಎತ್ತಿಕೊಳ್ಳಲಿದ್ದು, ರಾಜ್ಯಸರ್ಕಾರ ಕೂಡ ಉತ್ತರ ನೀಡುವ ನಿರೀಕ್ಷೆಯಿದೆ.