ಪಾಕಿಸ್ತಾನದ ನಿಷೇಧಿತ ಟೆಸ್ಟ್ ಲೆಗ್ ಸ್ಪಿನ್ನರ್ ದನಿಷ್ ಕನೇರಿಯಾ ಮತ್ತು ಅವರ ಕುಟುಂಬ ಭಾರತಕ್ಕೆ ಹಠಾತ್ ನಿರ್ಗಮಿಸಿರುವ ಸುತ್ತ ನಿಗೂಢತೆ ಆವರಿಸಿದ್ದು, ಕೆಲವು ಧಾರ್ಮಿಕ ಕ್ರಿಯೆಗಳನ್ನು ನಿರ್ವಹಿಸಲು ಅವರು ಭಾರತಕ್ಕೆ ಹೋಗಿದ್ದಾರೆಂದು ಅವರ ಸೋದರ ಹೇಳಿದ್ದಾರೆ.
ಕನೇರಿಯಾ , ಅವರ ಪತ್ನಿ ಮತ್ತು ಮಕ್ಕಳು ಹಾಗೂ ತಾಯಿ ಭಾನುವಾರ ರಾತ್ರಿ ಕೊಚ್ಚಿಗೆ ತೆರಳಿದ್ದು, ನಿಷೇಧಿತ ಆಟಗಾರ ಜೀವನೋಪಾಯ ಅರಸಿಕೊಂಡು ನೆಲೆಯಾಗಲು ಭಾರತಕ್ಕೆ ತೆರಳಿದ್ದಾರೆಂಬ ಊಹಾಪೋಹ ದಟ್ಟವಾಗಿದೆ.
ಹಿಂದು ಧರ್ಮದವರಾದ ತಮಗೆ ಭಾರತದಲ್ಲಿ ಹೆಚ್ಚು ನ್ಯಾಯ ಸಿಗುತ್ತಿತ್ತು ಎಂದು ಕನೇರಿಯಾ ಉದ್ಗರಿಸಿದ್ದರು. ಇದರಿಂದ ಕನೇರಿಯಾ ಭಾರತಕ್ಕೆ ಭೇಟಿ ನೀಡಿದ ನಿಜವಾದ ಉದ್ದೇಶದ ಬಗ್ಗೆ ಊಹಾಪೋಹಗಳು ದಟ್ಟವಾಗಿ ಹರಡಿದೆ.
ಪಾಕಿಸ್ತಾನ ಕ್ರಿಕೆಟ್ ಮಂಡಳಿಯ ಅಸಹಕಾರದ ಬಗ್ಗೆ ಬೇಸರಗೊಂಡ ಕನೇರಿಯಾ ತಾವು ಹಿಂದುವಾಗಿಲ್ಲದಿದ್ದರೆ ಪಾಕ್ ಮಂಡಳಿಯ ತಮ್ಮ ಪ್ರಕರಣವನ್ನು ಭಿನ್ನವಾಗಿ ನಿಭಾಯಿಸುತ್ತಿತ್ತು ಎಂದು ಹೇಳುವ ಮೂಲಕ ಪಾಕ್ ಕ್ರಿಕೆಟ್ ವಲಯದಲ್ಲಿ ಕೋಲಾಹಲ ಎಬ್ಬಿಸಿದ್ದರು.
ಪ್ರಧಾನಿ ನವಾಜ್ ಷರೀಫ್ ಅವರಿಗೆ ಬರೆದ ಪತ್ರಕ್ಕೆ ಕೂಡ ಯಾವುದೇ ಪ್ರತಿಕ್ರಿಯೆ ಬಂದಿಲ್ಲದಿರುವುದು ಕನೇರಿಯಾಗೆ ನಿರಾಶೆಗೊಳಿಸಿದೆ. ಪಾಕಿಸ್ತಾನದ ಪರ 61 ಟೆಸ್ಟ್ ಪಂದ್ಯ ಆಡಿರುವ ಕನೇರಿಯಾ ಅವರನ್ನು 2012ರಲ್ಲಿ ಸ್ಪಾಟ್ ಫಿಕ್ಸಿಂಗ್ ಆರೋಪದ ಮೇಲೆ ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಮಂಡಳಿ ನಿಷೇಧ ವಿಧಿಸಿತ್ತು.
ಕನೇರಿಯಾ ಸಿಂಧ್ ಹೈಕೋರ್ಟ್ನಲ್ಲಿ ಇನ್ನೊಂದು ಕೇಸ್ ಎದುರಿಸುತ್ತಿದ್ದು ಇಸಿಬಿ 200,000 ಪೌಂಡ್ ದಂಡ ಮತ್ತು ವೆಚ್ಚಗಳ ವಸೂಲಿಗೆ ಅರ್ಜಿ ಸಲ್ಲಿಸಿದೆ. ಪ್ರಧಾನ ಮಂತ್ರಿ ಮತ್ತು ಸರ್ಕಾರದ ಗಣ್ಯರಿಗೆ ಕಳಿಸಿರುವ ಪತ್ರಗಳಲ್ಲಿ ಕನೇರಿಯಾ ಮಾನವೀಯ ನೆಲೆಯಲ್ಲಿ ತಮ್ಮ ಪ್ರಕರಣಗಳನ್ನು ಇತ್ಯರ್ಥಗೊಳಿಸುವಂತೆ ಮನವಿ ಮಾಡಿದ್ದರು.
ಕನೇರಿಯಾ ಹೇಳಿಕೆಯಲ್ಲಿ ಕೋರ್ಟ್ನಲ್ಲಿ ತಮ್ಮ ವಿರುದ್ಧ ಆರೋಪ ಇನ್ನೂ ಸಾಬೀತಾಗಿಲ್ಲ. ಆದರೆ ಪಿಸಿಬಿ ಮತ್ತು ಇಸಿಬಿ ಜೀವಾವಧಿ ನಿಷೇಧ ವಿಧಿಸಿ ಜೀವನೋಪಾಯಕ್ಕೆ ಧಕ್ಕೆ ಉಂಟುಮಾಡಿದೆ ಎಂದು ತಿಳಿಸಿದ್ದಾರೆ.
ವೆಬ್ದುನಿಯಾ ಮೊಬೈಲ್ ಆಪ್ (ಡೌನ್ಲೋಡ್) ಮಾಡಿಕೊಂಡು ತಾಜಾ ಸುದ್ದಿಗಳನ್ನು ಪಡೆಯಿರಿ.