ದುಬೈ: ದ.ಆಫ್ರಿಕಾ ತಂಡದ ಕ್ರಿಕೆಟಿಗ ಇಮ್ರಾನ್ ತಾಹಿರ್ ಶ್ರೀಲಂಕಾ ವಿರುದ್ಧ ನಡೆಯುತ್ತಿರುವ ಏಕದಿನ ಪಂದ್ಯದಲ್ಲಿ ವಿಕೆಟ್ ಕಿತ್ತು ಸಂಭ್ರಮಿಸಿದ ಪರಿಗೆ ಐಸಿಸಿ ದಂಡ ಹಾಕಿದೆ. ವಿಕೆಟ್ ಕಿತ್ತು ಸಂಭ್ರಮಿಸಿದರೆ ಶಿಕ್ಷೆ ಯಾಕೆ ಎನ್ನುತ್ತೀರಾ? ಅವರು ಸಂಭ್ರಮಿಸಿದ ಪರಿ ಹಾಗಿತ್ತು.
ಶ್ರೀಲಂಕಾ ಬ್ಯಾಟ್ಸ್ ಮನ್ ಅಸೇಲಾ ಗುಣರತ್ನೆ ವಿಕೆಟ್ ಪಡೆದ ನಂತರ ತಾಹಿರ್ ತಮ್ಮ ಟಿ ಶರ್ಟ್ ಬಿಚ್ಚಿ ತಮ್ಮ ಮೈ ಮೇಲಿದ್ದ ಪಾಕಿಸ್ತಾನದ ಮುಸ್ಲಿಂ ಧರ್ಮ ಗುರು ಜುನೈದ್ ಜಮ್ಷೆಡ್ ಹಚ್ಚೆಯನ್ನು ತೋರಿಸಿ ಸಂಭ್ರಮಿಸಿದ್ದರು. ಜುನೈದ್ ಕಳೆದ ಡಿಸೆಂಬರ್ ನಲ್ಲಿ ವಿಮಾನ ಅಪಘಾತವೊಂದರಲ್ಲಿ ತೀರಿಕೊಂಡಿದ್ದರು.
ಈ ರೀತಿ ವೈಯಕ್ತಿಕ ಸಂದೇಶಗಳನ್ನು ಕ್ರೀಡಾಂಗಣದಲ್ಲಿ ಎತ್ತಿ ತೋರಿಸುವುದು ಐಸಿಸಿ ನಿಯಮಾವಳಿಗೆ ವಿರುದ್ಧವಾಗಿದೆ. ಇದಕ್ಕಾಗಿ ತಾಹಿರ್ ಗೆ ದಂಡ ವಿಧಿಸಲಾಗಿದೆ. ತನ್ನ ಮೇಲಿರುವ ಆಪಾದನೆಯನ್ನು ಒಪ್ಪಿಕೊಂಡು ತಾಹಿರ್ ದಂಡಕ್ಕೆ ತಲೆಬಾಗುವುದಾಗಿ ತಿಳಿಸಿರುವ ಕಾರಣ ಹೆಚ್ಚಿನ ವಿಚಾರಣೆ ನಡೆಸದೇ ಪ್ರಕರಣ ಕೈಬಿಡಲಾಗಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ