ವಿಶಾಖಪಟ್ಟಣಂ: ಸತತ ಮೂರು ಶತಕಗಳು, ಮೂರು ಅರ್ಧಶತಕಗಳು.. ಚೇತೇಶ್ವರ ಪೂಜಾರ ಬೆಸ್ಟ್ ಫಾರ್ಮ್ ನಲ್ಲಿದ್ದಾರೆ. ಇದಕ್ಕೆಲ್ಲಾ ತಮ್ಮ ಸ್ಥಿರತೆಯ ಮೇಲೆ ಹೆಚ್ಚು ಗಮನಕೊಡಲು ಹೇಳಿದ ಕೋಚ್ ಅನಿಲ್ ಕುಂಬ್ಳೆಯ ಸಲಹೆಯೇ ಕಾರಣ ಎಂದು ಅವರು ಹೇಳಿಕೊಂಡಿದ್ದಾರೆ.
“ನಾನು ಉತ್ತಮ ಬ್ಯಾಟಿಂಗ್ ಮಾಡುತ್ತಿದ್ದರೂ, ದೊಡ್ಡ ಮೊತ್ತ ಗಳಿಸಲು ವಿಫಲನಾಗುತ್ತಿದ್ದೆ. ಈ ಬಗ್ಗೆ ಅನಿಲ್ ಕುಂಬ್ಳೆ ಬಳಿ ಮಾತನಾಡಿದಾಗ, ನನ್ನ ಬ್ಯಾಟಿಂಗ್ ತಂತ್ರಗಾರಿಕೆಯಲ್ಲಿ ಯಾವುದೇ ಕೊರತೆಯಿಲ್ಲ. ಸ್ಥಿರತೆ ಬಗ್ಗೆ ಹೆಚ್ಚು ಗಮನ ಕೇಂದ್ರೀಕರಿಸುವಂತೆ ಹೇಳಿದರು. ಹಾಗೆ ಮಾಡಿದ ಮೇಲೆ ನಾನು ದೊಡ್ಡ ಮೊತ್ತ ಗಳಿಸಲು ಸಾಧ್ಯವಾಗಿದೆ” ಎಂದು ನಿನ್ನೆ ಶತಕ ಗಳಿಸಿದ ಪೂಜಾರ ಹೇಳಿದರು.
ಆಟದಲ್ಲಿ ಅವರ ಯೋಜನೆ ಬದಲಾದುದರ ಪರಿಣಾಮ ನಿನ್ನೆಯೇ ಗೊತ್ತಾಗಿತ್ತು. ರಾಹುಲ್ ದ್ರಾವಿಡ್ ನ ಪ್ರತಿರೂಪದಂತೆ ಆಡುವ ಪೂಜಾರ ನಿನ್ನೆ ಸಿಕ್ಸ್ ಬಾರಿಸುವ ಮೂಲಕ ಶತಕ ಪೂರ್ತಿಗೊಳಿಸಿ ಅಚ್ಚರಿ ಮೂಡಿಸಿದ್ದರು.
ಇದೇ ವೇಳೆ ವಿರಾಟ್ ಕೊಹ್ಲಿ ಜತೆ ಬ್ಯಾಟಿಂಗ್ ಮಾಡುವಾಗ ಮೊದಲ ಅವಧಿಯಲ್ಲಿ ರನೌಟ್ ಆಗುವ ಅಪಾಯಕ್ಕೆ ಒಳಗಾಗಿದ್ದರು. ಈ ಬಗ್ಗೆ ಪ್ರಶ್ನಿಸಿದಾಗ “ನಮ್ಮ ನಡುವೆ ಸಂವಹನದ ಕೊರತೆಯಿರಲಿಲ್ಲ. ಆದರೆ ಬಾಲ್ ನಿರ್ಣಯಿಸುವಲ್ಲಿ ಎಡವಿದೆವು. ಊಟದ ವಿರಾಮದಲ್ಲಿ ನಾವಿಬ್ಬರೂ ಈ ಬಗ್ಗೆ ಚರ್ಚಿಸಿದ ನಂತರ ರನ್ ಸರಾಗವಾಗಿ ಬಂತು” ಎಂದಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ