ಭಾರತದ ಪ್ರವಾಸ ಸಂದರ್ಭದಲ್ಲಿ ಮಧ್ಯದಲ್ಲೇ ಪ್ರವಾಸ ಮೊಟಕು ಮಾಡಿದ ವೆಸ್ಟ್ ಇಂಡೀಸ್ ಕ್ರಿಕೆಟ್ ಮಂಡಳಿ ವಿರುದ್ಧ 250 ಕೋಟಿ ರೂ. ಹಾನಿ ಪರಿಹಾರ ನೀಡಬೇಕೆಂದು ಬಿಸಿಸಿಐ ಹಕ್ಕು ಪ್ರತಿಪಾದಿಸಿದೆ. ಮಂಡಳಿ 15 ದಿನಗಳೊಳಗೆ ಉತ್ತರಿಸದಿದ್ದರೆ ಕಾನೂನಿನ ಕ್ರಮವನ್ನು ಕೈಗೊಳ್ಳುವುದಾಗಿ ಬಿಸಿಸಿಐ ಬೆದರಿಕೆ ಹಾಕಿದೆ.
ಐದು ಏಕದಿನ ಪಂದ್ಯಗಳು, ಒಂದು ಟ್ವೆಂಟಿ 20 ಮತ್ತು ಮೂರು ಟೆಸ್ಟ್ ಪಂದ್ಯಗಳನ್ನು ಆಡಬೇಕಿದ್ದ ವೆಸ್ಟ್ ಇಂಡೀಸ್ ತಂಡ ಧರ್ಮಶಾಲಾದಲ್ಲಿ ನಾಲ್ಕನೇ ಏಕ ದಿನ ಪೂರ್ಣಗೊಂಡ ಬಳಿಕ ಪ್ರವಾಸವನ್ನು ರದ್ದುಗೊಳಿಸಿ ಹಿಂದಿರುಗಿತ್ತು. ವೆಸ್ಟ್ ಇಂಡೀಸ್ ಆಟಗಾರರು ಮತ್ತು ವೆಸ್ಟ್ ಇಂಡೀಸ್ ಆಟಗಾರರ ಒಕ್ಕೂಟದ ನಡುವೆ ವಿವಾದ ಉದ್ಭವಿಸಿದ್ದರಿಂದ ಪ್ರವಾಸವನ್ನು ಅರ್ಧದಲ್ಲೇ ಮೊಟಕುಮಾಡಲಾಗಿತ್ತು.
ಪ್ರವಾಸವನ್ನು ಅರ್ಧದಲ್ಲೇ ಮೊಟಕು ಮಾಡಿದ್ದರಿಂದ ಬಿಸಿಸಿಐ 400 ಕೋಟಿ ರೂ. ನಷ್ಟವನ್ನು ಅನುಭವಿಸಿದೆ. ಭಾರತೀಯ ಕ್ರಿಕೆಟ್ ಮಂಡಳಿ ಡಬ್ಲ್ಯುಐಸಿಬಿ ಅಧ್ಯಕ್ಷ ಡೇವ್ ಕ್ಯಾಮರೂನ್ಗೆ ನಾಲ್ಕು ಪುಟಗಳ ಪತ್ರ ಬರೆದಿದ್ದು, ತಮಗುಂಟಾದ ನಷ್ಟಕ್ಕೆ ಕಾನೂನು ಕ್ರಮ ಕೈಗೊಳ್ಳುವುದಾಗಿ ಕಾರ್ಯದರ್ಶಿ ಸಂಜಯ್ ಪಟೇಲ್ ತಿಳಿಸಿದ್ದಾರೆ.