Select Your Language

Notifications

webdunia
webdunia
webdunia
webdunia

ಸದ್ಯದಲ್ಲೇ ಭಾರತ ಅಗ್ರಪಟ್ಟ ಮರಳಿ ಪಡೆಯಲಿದೆ: ಮುರಳೀಧರನ್

ಸದ್ಯದಲ್ಲೇ ಭಾರತ ಅಗ್ರಪಟ್ಟ ಮರಳಿ ಪಡೆಯಲಿದೆ: ಮುರಳೀಧರನ್
ನವದಹೆಲಿ , ಗುರುವಾರ, 22 ಸೆಪ್ಟಂಬರ್ 2011 (09:25 IST)
ಇಂಗ್ಲೆಂಡ್ ಸರಣಿಯಲ್ಲಿ ಹೀನಾಯ ಪ್ರದರ್ಶನ ನೀಡಿರುವುದರ ಹೊರತಾಗಿಯೂ ತಿರುಗೇಟು ನೀಡಲಿರುವ ಟೀಮ್ ಇಂಡಿಯಾ ಸದ್ಯದಲ್ಲೇ ನಂಬರ್ ವನ್ ಪಟ್ಟ ಮರಳಿ ಪಡೆಯಲಿದೆ ಎಂದು ವಿಶ್ವ ವಿಖ್ಯಾತ ಆಫ್ ಸ್ಪಿನ್ನರ್ ಮುತ್ತಯ್ಯ ಮುರಳೀಧರನ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ತಾಜಾ ಸುದ್ದಿ, ಕನ್ನಡ ಸುದ್ದಿ, ಕನ್ನಡ ಲೇಖನಗಳಿಗಾಗಿ ನಿಮ್ಮ ವೆಬ್‌ದುನಿಯಾಕ್ಕೆ ಭೇಟಿ ಕೊಡಿ

ಇಂಗ್ಲೆಂಡ್ ಪ್ರವಾಸದ ವೇಳೆ ನಂ.1 ಪಟ್ಟದಲ್ಲಿದ್ದ ಭಾರತ ನಾಲ್ಕು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ 0-4 ಅಂತರದ ಮುಖಭಂಗಕ್ಕೊಳಗಾಗಿತ್ತು. ಇದರೊಂದಿಗೆ ರ‌್ಯಾಂಕಿಂಗ್‌ನಲ್ಲಿ ಮೂರನೇ ಸ್ಥಾನಕ್ಕೆ ಕುಸಿದಿತ್ತು. ಅಷ್ಟು ಸಾಲದ್ದಕ್ಕೆ ಟೆಸ್ಟ್ ಸರಣಿ ಬೆನ್ನಲ್ಲೇ ನಡೆದ ಏಕದಿನ ಸರಣಿಯಲ್ಲೂ 0-3 ಅಂತರದ ಹೀನಾಯ ಸೋಲಿಗೆ ಗುರಿಯಾಗಿತ್ತಲ್ಲದೆ ರ‌್ಯಾಂಕಿಂಗ್‌ನಲ್ಲಿ ಮೂರರಿಂದ ಐದನೇ ಸ್ಥಾನಕ್ಕೆ ಇಳಿಕೆ ಕಂಡಿತ್ತು.

ಭಾರತ ಶ್ರೇಷ್ಠ ತಂಡ. ಕೇವಲ ಒಂದು ಕೆಟ್ಟ ಸರಣಿಯಿಂದ ಅವರ ಸಾಮರ್ಥ್ಯವನ್ನು ತುಲನೆ ಮಾಡುವಂತಿಲ್ಲ. ಮುಂಬರುವ ಆಸ್ಟ್ರೇಲಿಯಾ ಸರಣಿಯಲ್ಲಿ ತಿರುಗಿ ಬೀಳುವ ಅವಕಾಶ ತಂಡಕ್ಕಿದೆ ಎಂದು ಮುರಳೀಧರನ್ ಅಭಿಪ್ರಾಯಪಟ್ಟಿದ್ದಾರೆ.

ಇಂಗ್ಲೆಂಡ್ ಪ್ರವಾಸದಲ್ಲಿ ಅನೇಕ ಪ್ರಮುಖ ಆಟಗಾರರು ಗಾಯದ ಸಮಸ್ಯೆಗೆ ತುತ್ತಾಗಿದ್ದರು. ಹೀಗಾಗಿ ಇದು ಅವರದ್ದು ಶ್ರೇಷ್ಠ ತಂಡವಾಗಿರಲಿಲ್ಲ. ಇಂತಹ ಪರಿಸ್ಥಿತಿ ಪ್ರತಿಯೊಂದು ತಂಡಕ್ಕೂ ಎದುರಾಗುತ್ತದೆ. ಆದರೆ ಮಹೇಂದ್ರ ಸಿಂಗ್ ಧೋನಿ ಮುಂದಾಳತ್ವದ ಟೀಮ್ ಇಂಡಿಯಾ ಸದ್ಯದಲ್ಲೇ ಅಗ್ರಸ್ಥಾನಕ್ಕೇರುವ ಭರವಸೆ ನನ್ನಲ್ಲಿದೆ ಎಂದಿದ್ದಾರೆ.

ಇದೇ ಸಂದರ್ಭದಲ್ಲಿ ಅತಿಯಾದ ಕ್ರಿಕೆಟ್ ಭಾರತಕ್ಕೆ ಮುಳುವಾಗಿತ್ತು ಎಂಬ ಹಲವಾರು ಕ್ರಿಕೆಟ್ ಪಂಡಿತರ ವಾದವನ್ನು ಮುರಳೀಧರನ್ ಒಪ್ಪಲಿಲ್ಲ. ವೀರೇಂದ್ರ ಸೆಹ್ವಾಗ್, ಯುವರಾಜ್ ಸಿಂಗ್ ಹಾಗೂ ಗೌತಮ್ ಗಂಭೀರ್ ಅವರಂತಹ ಆಟಗಾರರು ವೆಸ್ಟ್‌ಇಂಡೀಸ್ ಪ್ರವಾಸ ಕೈಗೊಂಡಿರಲಿಲ್ಲ. ಹೀಗಿದ್ದರೂ ಅವರು ಇಂಗ್ಲೆಂಡ್‌ ಸರಣಿ ವೇಳೆ ಗಾಯಾಳುವಾದರು. ಇವೆಲ್ಲವೂ ಕ್ರಿಕೆಟ್‌ನ ಭಾಗ. ಹೀಗಾಗಿ ಅತಿಯಾದ ಕ್ರಿಕೆಟ್ ಕಾರಣ ಎಂಬುದು ನನಗನಿಸುತ್ತಿಲ್ಲ ಎಂದಿದ್ದಾರೆ.

ಪ್ರಾಯವಾದಂತೆ ಗಾಯದ ಸಮಸ್ಯೆ ಹೆಚ್ಚಾಗುತ್ತದೆ. ಸಾಲದ್ದಕ್ಕೆ ಇತ್ತೀಚೆಗಿನ ದಿನಗಳಲ್ಲಿ ಎಲ್ಲ ತಂಡದ ಆಟಗಾರರು ಹೆಚ್ಚೆಚ್ಚು ಕ್ರಿಕೆಟ್ ಆಡುತ್ತಿರುತ್ತಾರೆ. ನನ್ನ ಪಾಲಿಗಂತೂ ಹೆಚ್ಚು ಕ್ರಿಕೆಟ್ ಆಡಿದ ಹಾಗೆಯೇ ಹೆಚ್ಚು ಫಿಟ್‌ನೆಸ್ ಹಾಗೂ ಉತ್ತಮ ಆಟಗಾರನಾಗಲು ಸಾಧ್ಯವಾಗುತ್ತದೆ ಎಂದಿದ್ದಾರೆ.

ಇದೇ ಸಂದರ್ಭದಲ್ಲಿ ಹಿಂದೊಮ್ಮೆ ತನ್ನ ದಾಖಲೆಯ ಸಮೀಪ ತಲುಪಲು ಹರಭಜನ್ ಸಿಂಗ್ ಅವರಿಗೆ ಮಾತ್ರ ಸಾಧ್ಯ ಎಂದು ಹೇಳಿಕೆ ನೀಡಿದ್ದ ಮುರಳಿ, ಈ ಪಂಜಾಬ್ ಆಫ್ ಸ್ಪಿನ್ನರ್‌ನ ಕಳಪೆ ಪ್ರದರ್ಶನದ ನಡುವೆಯೂ ಬೆಂಬಲ ವ್ಯಕ್ತಪಡಿಸಿದ್ದಾರೆ.

ನಾನು ಅವರಿಗೆ ಹೇಳ ಬಯಸುತ್ತೇನೆಂದರೆ ಟೀಕೆಗಳ ಬಗ್ಗೆ ಭಯಪಡಬೇಡ. ನಿನ್ನ ಪ್ರದರ್ಶನದತ್ತ ಗಮನಹರಿಸು. ಇದು ಎಲ್ಲರ ಜೀವನದಲ್ಲಿ ಬರುವಂತಹ ಒಂದು ಕಳಪೆ ಅವಧಿ ಮಾತ್ರ ಎಂದಿದ್ದಾರೆ.

ಭಜ್ಜಿಗೆ ವಿಶ್ರಾಂತಿಯ ಅಗತ್ಯವಿತ್ತು. ಖಂಡಿತವಾಗಿಯೂ ಅವರು ತಿರುಗಿ ಬೀಳಲಿದ್ದಾರೆ. ಅವರೀಗಲೂ ಯುವಕನಾಗಿದ್ದು, ಇನ್ನೂ ಆರು ವರ್ಷಗಳ ಕ್ರಿಕೆಟ್ ಬಾಕಿ ಉಳಿದಿದೆ. ಭಜ್ಜಿ ಸಾಮರ್ಥ್ಯದ ಬಗ್ಗೆ ನನಗೆ ಪೂರ್ಣ ವಿಶ್ವಾಸವಿದ್ದು, ಕೇವಲ ಒಂದೆರಡು ಕಳಪೆ ಪ್ರವಾಸದಿಂದ ಕೆಟ್ಟ ಬೌಲರ್ ಆಗುವುದಿಲ್ಲ ಎಂದರು.

Share this Story:

Follow Webdunia kannada