ಪ್ರತಿಷ್ಠಿತ ಇಂಗ್ಲೆಂಡ್ ಸರಣಿಗಾಗಿ ಟೀಮ್ ಇಂಡಿಯಾ ಆಯ್ಕೆ ಸಂದರ್ಭದಲ್ಲಿ ತಂಡದಲ್ಲಿ ಮೀಸಲು ಓಪನರ್ ಬ್ಯಾಟ್ಸ್ಮನ್ಗೆ ಸ್ಥಾನ ನೀಡದಿರುವುದು ಮಾಜಿ ನಾಯಕ ಸುನಿಲ್ ಗಾವಸ್ಕರ್ ಅಸಮಾಧಾನಕ್ಕೆ ಕಾರಣವಾಗಿದೆ.
ಗೌತಮ್ ಗಂಭೀರ್ ಎಲ್ಬೋ ತೊಂದರೆಗೆ ಒಳಗಾದ ಹಿನ್ನಲೆಯಲ್ಲಿ ದ್ವಿತೀಯ ಟೆಸ್ಟ್ನಲ್ಲಿ ಅಭಿನವ್ ಮುಕುಂದ್ ಜತೆ ತಂಡದ ಇನ್ನಿಂಗ್ಸನ್ನು ಆರಂಭಿಸುವ ಅನಿವಾರ್ಯತೆಯನ್ನು ರಾಹುಲ್ ದ್ರಾವಿಡ್ ಎದುರಿಸಿದ್ದರು. ಸ್ಫೋಟಕ ಆರಂಭಿಕ ವೀರೇಂದ್ರ ಸೆಹ್ವಾಗ್ ಮೊದಲೆರಡು ಪಂದ್ಯಗಳಿಗೆ ಅಲಭ್ಯರಾಗಿದ್ದರೆ ಎಂದು ಮೊದಲೇ ತಿಳಿಸಲಾಗಿತ್ತು.
ಮೊದಲ ಟೆಸ್ಟ್ ಸಂದರ್ಭದಲ್ಲಿ ಗಂಭೀರ್ ಗಾಯಕ್ಕೊಳಗಾದ ಹಿನ್ನಲೆಯಲ್ಲಿ ದ್ವಿತೀಯ ಇನ್ನಿಂಗ್ಸ್ನಲ್ಲಿ ಅಭಿನವ್ ಜತೆ ದ್ರಾವಿಡ್ ಆರಂಭಿಕನಾಗಿ ಕ್ರೀಸಿಗಿಳಿದಿದ್ದರು. ಆದರೆ ಈ ಬಗ್ಗೆ ಆಯ್ಕೆ ಸಮಿತಿಯನ್ನು ಟೀಕೆಗೆ ಗುರಿ ಮಾಡಿರುವ ಗಾವಸ್ಕರ್, ಇಂತಹ ಅನಿರೀಕ್ಷಿತ ಪರಿಸ್ಥಿತಿ ಎದುರಿಸುವ ನಿಟ್ಟಿನಲ್ಲಿ ಭಾರತವು ಮೂವರು ಆರಂಭಿಕರನ್ನು ತಂಡದಲ್ಲಿ ಸೇರಿಸಿಕೊಳ್ಳಬೇಕಿತ್ತು ಎಂದಿದ್ದಾರೆ.
ಶ್ರೀಲಂಕಾ ಪ್ರವಾಸದಲ್ಲಿ ಕೇವಲ ಇಬ್ಬರು ಓಪನರುಗಳಿದ್ದರೆ ಮಾತ್ರ ಪರಿಸ್ಥಿತಿಯನ್ನು ಅರಿತುಕೊಳ್ಳಬಹದು. ಯಾಕೆಂದರೆ ಅಲ್ಲಿ ಯಾವುದೇ ಬ್ಯಾಟ್ಸ್ಮನ್ ಹತ್ತಿರ ಬೇಕಾದರೂ ಇನ್ನಿಂಗ್ಸ್ ಆರಂಭಿಸಲು ಹೇಳಬಹುದು. ಆದರೆ ಇಂಗ್ಲೆಂಡ್, ಆಸ್ಟ್ರೇಲಿಯಾ ಮತ್ತು ದಕ್ಷಿಣ ಆಫ್ರಿಕಾಗಳಂತಹ ದೇಶದಲ್ಲಿ ಚೆಂಡು ವಿಪರೀತವಾಗಿ ಕೆಲಸ ಮಾಡುತ್ತಿದ್ದು, ತಂಡವೊಂದು ಮೂರು ಓಪನರುಗಳನ್ನು ಹೊಂದಿರಬೇಕಾಗಿರುವುದು ಅಗತ್ಯವೆನಿಸಿದೆ. ಒಂದು ವೇಳೆ ಒರ್ವ ಗಾಯಗೊಂಡರೂ ಉಳಿದ ಇಬ್ಬರು ಫಿಟ್ ಓಪನರುಗಳೊಂದಿಗೆ ಇನ್ನಿಂಗ್ಸ್ ಆರಂಭಿಸಬಹುದು ಎಂದಿದ್ದಾರೆ.
ದ್ರಾವಿಡ್ ಬಗ್ಗೆ ಮಾತನಾಡಿದ ಅವರು ಮೂರನೇ ಕ್ರಮಾಂಕದ ಬ್ಯಾಟ್ಮನ್, ಜತೆಗಾರನ ಜತೆ ಆರಂಭಿಕನಾಗಿ ಕಣಕ್ಕಿಳಿಯುವಾಗ ವಿಭಿನ್ನ ಮನೋಸ್ಥಿತಿಯಿರುತ್ತದೆ ಎಂದಿದ್ದಾರೆ.