ಸರಿಯಾದ ಜಾಗದಲ್ಲಿ ಬಾಲ್ ಎಸೆಯಲು ಗಮನ ಕೇಂದ್ರಿಕರಿಸುತ್ತೇನೆ. ಮೀತಿಮೀರಿದ ಶ್ರಮಕ್ಕೆ ಒತ್ತು ನೀಡುವುದಿಲ್ಲ. ಸ್ವಾಭಾವಿಕವಾಗಿ ಬಾಲ್ ಬಿಡುಗಡೆ ಮಾಡಲು ಯತ್ನಿಸುತ್ತೇನೆ ಎಂದು ಶ್ರೀಲಂಕಾ ವಿರುದ್ಧದ ಕಾನ್ಪುರ ಟೆಸ್ಟ್ನ ಪಂದ್ಯಶ್ರೇಷ್ಠ ಪ್ರಶಸ್ತಿ ವಿಜೇತ ಭಾರತದ ವೇಗಿ ಶಾಂತಕುಮಾರನ್ ಶ್ರೀಶಾಂತ್ ಹೇಳಿದ್ದಾರೆ.
ನಾಗೀನ ಹಳೆ ಲಯವನ್ನು ಕಂಡುಕೊಂಡಿರುವುದಕ್ಕೆ ದೇವರಿಗೆ ಧನ್ಯವಾದ ಅರ್ಪಿಸುತ್ತೇನೆ. ಇದೀಗ ಎರಡು ದಿಕ್ಕಿನತ್ತ ಬಾಲ್ ಸ್ವಿಂಗ್ ಮಾಡಲು ಯತ್ನಿಸುತ್ತೇನೆ. ಇದರಿಂದಾಗಿ ರಿವರ್ಸ್ ಸ್ವಿಂಗ್ಗೆ ಹೆಚ್ಚಿನ ನೆರವು ಲಭಿಸುತ್ತದೆ ಎಂದು ಅವರು ಹೇಳಿದರು.
ಕಾನ್ಪುರದಲ್ಲಿ ನೀಡಿದ ಪ್ರದರ್ಶನದಿಂದ ತುಂಬಾ ಪ್ರಚೋದನೆ ಸಿಕ್ಕಿದೆ. ದೇಶಕ್ಕಾಗಿ ಇನ್ನೂ ಹೆಚ್ಚಿನ ಪಂದ್ಯಗಳನ್ನಾಡಲಿದ್ದೇನೆ. ಈ ರೀತಿ ತಂಡಕ್ಕೆ ಪುನರಾಗಮನ ಮಾಡಿರುವುದು ನನ್ನಲ್ಲಿ ಹೊಸ ಹುರುಪು ಉಂಟುಮಾಡಿದೆ ಎಂದು ಆತ್ಮವಿಶ್ವಾಸದಿಂದ ಶ್ರೀ ನುಡಿದರು.
ಇದೊಂದು ಕನಸಾಗಿತ್ತು. ಕ್ರಿಕೆಟ್ನ ಬಾಲಪಾಠ ತಿಳಿಯದಿದ್ದಲ್ಲಿ ತಂಡಕ್ಕೆ ಮರಳಿ ಸೇರಿಕೊಳ್ಳುವುದು ಅಸಾಧ್ಯವಾಗಿತ್ತು. ನನ್ನ ಗುರು ಡೆನ್ನಿಸ್ ಲಿಲ್ಲಿ ಹಾಗೂ ಟಿ.ಎ. ಶೇಖರ್ ಅವರು ಕಲಿಸಿಕೊಟ್ಟ ಬಾಲಪಾಠ ತುಂಬಾ ನೆರವಿಗೆ ಬಂದಿದೆ. ಅವರಿಂದಾಗಿಯೇ ನಾನೀಗ ಈ ಸ್ಥಿತಿಗೆ ತಲುಪಿದ್ದೇನೆ. ಪ್ರಥಮ ದರ್ಜೆ ಸಹಿತ ಸಿಕ್ಕಿದ ಅವಕಾಶಗಳಲ್ಲಿ ಆಟವಾಡಿರುವುದು ಸಾಕಷ್ಟು ನೆರವಿಗೆ ಬಂತು ಎಂದು ಅವರು ಹೇಳಿದರು.
ನನ್ನು ಯಶಸ್ಸಿನ ಹಿಂದೆ ಕುಟುಂಬ ಹಾಗೂ ಆಪ್ತ ಸ್ನೇಹಿತರ ಪ್ರಾರ್ಥನೆ ಇತ್ತು ಎಂದು ಅವರು ನೆನಪಿಸಿಕೊಂಡರು.
ಅದೇ ವೇಳೆ ಶ್ರೀ ಮುಂಬೈ ವಿಮಾನ ನಿಲ್ದಾಣದಲ್ಲಿ ಬಾಲಿವುಡ್ ಸ್ಟಾರ್ ಅಮಿತಾಬ್ ಬಚ್ಚನ್ ಹಾಗೂ ಅವರ ಪತ್ನಿ ಜಯ ಬಚ್ಚನ್ರನ್ನು ಭೇಟಿಯಾದರು.
ನಾನು ಹಾಗೂ ನನ್ನ ಕುಟುಂಬ ಬಿಗ್ ಬಿಯವರ ದೊಡ್ಡ ಅಭಿಮಾನಿ. ಅವರು ನನಗೆ ಪ್ರೇರಣೆಯಾಗಿದ್ದು, ಉತ್ತಮವಾಗಿ ವ್ಯವಹರಿಸುತ್ತಾರೆ. ಕಾನ್ಪರ ಟೆಸ್ಟ್ನಲ್ಲಿನ ನನ್ನ ಪ್ರದರ್ಶನಕ್ಕಾಗಿ ಅಭಿನಂದಿಸಿದರು ಎಂದು ಶ್ರೀಶಾಂತ್ ಹೇಳಿದರು.