ಭಾರತ ತಂಡಕ್ಕೆ ಮರಳುವ ವಿಶ್ವಾಸವಿದೆ: ಶ್ರೀಶಾಂತ್
ಕೊಚ್ಚಿ , ಸೋಮವಾರ, 24 ಜೂನ್ 2013 (14:47 IST)
ಸ್ಪಾಟ್ ಫಿಕ್ಸಿಂಗ್ ಹಗರಣದಲ್ಲಿ ಸಿಲುಕಿ ಇದೀಗ ಜಾಮೀನಿನ ಮೇಲೆ ಬಿಡುಗಡೆ ಹೊಂದಿರುವ ವೇಗಿ ಎಸ್. ಶ್ರೀಶಾಂತ್ ಅವರು ಮೊದಲ ಬಾರಿ ತರಬೇತಿ ಆರಂಭಿಸಿದ್ದಾರೆ ಮತ್ತು ಸದ್ಯವೇ ತಂಡಕ್ಕೆ ಮರಳುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.ಮತ್ತೂಮ್ಮೆ ತರಬೇತಿ ಆರಂಭಿಸಿದ್ದೇನೆ.. ದೇವರ ದಯೆ.. ಮೊದಲ ದಿನ.. ನೈಜ ಜೀವನಕ್ಕೆ ಮರಳುತ್ತಿದ್ದೇನೆ..ನನ್ನನ್ನು ಬೆಂಬಲಿಸಿದ ಎಲ್ಲರಿಗೂ ಅನಂತ ಅನಂತ ಧನ್ಯವಾದಗಳು ಎಂದು ಶ್ರೀಶಾಂತ್ ಟ್ವಿಟರ್ನಲ್ಲಿ ಬರೆದಿದ್ದಾರೆ.ಸ್ಪಾಟ್ ಫಿಕ್ಸಿಂಗ್ನಲ್ಲಿ ಭಾಗಿಯಾಗಿರುವ ಆರೋಪದಡಿ ಶ್ರೀಶಾಂತ್ ಮತ್ತು ರಾಜಸ್ಥಾನ್ ರಾಯಲ್ಸ್ ತಂಡದ ಇನ್ನಿಬ್ಬರು ಸದಸ್ಯರಾದ ಅಜಿತ್ ಚಾಂಡಿಲ ಮತ್ತು ಅಂಕಿತ್ ಚವಾಣ್ ಅವರನ್ನು ದಿಲ್ಲಿ ಪೊಲೀಸರು ಬಂಧಿಸಿದ್ದರು.ನಾನು ಕಠಿನ ತರಬೇತಿ ನಡೆಸಲಿದ್ದೇನೆ ಮತ್ತು ಕಾದು ನೋಡಿ.. ತಾಳ್ಮೆ ವಹಿಸಿ.. ಸದ್ಯವೇ ತಂಡಕ್ಕೆ ಮರಳುವ ಭರವಸೆ ನನಗಿದೆ.. ಜೈ ಮಾತಾ ದಿ, ಎಂದು ಅವರು ಟ್ವೀಟ್ ಮಾಡಿದ್ದಾರೆ.ಜೂನ್ 11ರಂದು ಜಾಮೀನು ಪಡೆಯುವ ಮೊದಲು ಶ್ರೀಶಾಂತ್ ತಿಹಾರ್ ಜೈಲಿನಲ್ಲಿ 27 ದಿನ ಇದ್ದರು. ಅವರು ಸದ್ಯವೇ ಸ್ಪಾಟ್ ಫಿಕ್ಸಿಂಗ್ ಹಗರಣದ ತನಿಖೆಗಾಗಿ ಬಿಸಿಸಿಐ ನೇಮಕ ಮಾಡಿದ ಆಯೋಗದೆದುರು ಹೇಳಿಕೆ ನೀಡಲಿದ್ದಾರೆ.