ಸ್ಪಾಟ್ ಫಿಕ್ಸಿಂಗ್ ಬೆಳಕಿಗೆ ಬಂದ 6ನೇ ಆವೃತ್ತಿಯ ಐಪಿಎಲ್ ಟಿ-20 ಕ್ರಿಕೆಟ್ ಪಂದ್ಯಾವಳಿಯ ಉಳಿದ ಪಂದ್ಯಗಳಿಗೆ ತಡೆ ನೀಡುವಂತೆ ಕೋರಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸುಪ್ರೀಂ ಕೋರ್ಟ್ ತಳ್ಳಿ ಹಾಕಿದೆ.
ಆದರೆ, ಇದೇ ವೇಳೆ ಸ್ಪಾಟ್ ಫಿಕ್ಸಿಂಗ್ನಂತಹ ದುಷ್ಕೃತ್ಯದಿಂದಾಗಿ 'ಸಜ್ಜನರ ಆಟ'ಕ್ಕೆ ಕಳಂಕ ಮೆತ್ತಿಕೊಂಡ ಬಗ್ಗೆ ಸರ್ವೋಚ್ಚ ನ್ಯಾಯಾಲಯ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.
' ಅಕ್ರಮ ನಡೆದಿರುವುದರಲ್ಲಿ ಅನುಮಾನವೇ ಇಲ್ಲ. ಈ ಬಗ್ಗೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ನಿರ್ಲಕ್ಷ್ಯ ಧೋರಣೆ ಅನುಸರಿಸುತ್ತಿದೆ. ಇದು ದೊಡ್ಡ ಸಮಸ್ಯೆ. ಈ ಪರಿಪಾಠ ನಿಲ್ಲಬೇಕು' ಎಂದು ನ್ಯಾಯಾಲಯವು ಕ್ರಿಕೆಟ್ ಮಂಡಳಿಗೆ ಕಠಿಣ ಶಬ್ದಗಳಲ್ಲಿ ಹೇಳಿದೆ.
ಈ ಮಧ್ಯೆ, ಮಂಗಳವಾರದಿಂದ ಆರಂಭಗೊಂಡಿರುವ ಪ್ಲೇ-ಆಫ್ ಸುತ್ತಿನ ಪಂದ್ಯಗಳಿಗೆ ತಡೆ ಕೋರಿದ ಅರ್ಜಿಯ ವಿಚಾರಣೆ ಕೈಗೆತ್ತಿಕೊಂಡ ನ್ಯಾಯಮೂರ್ತಿ ಬಿ.ಎಸ್. ಚೌವಾಣ್ ಮತ್ತು ದೀಪಕ್ ಮಿಶ್ರಾ ಅವರನ್ನೊಳಗೊಂಡ ವಿಭಾಗೀಯ ಪೀಠ, ತಡೆಯಾಜ್ಞೆ ನೀಡಲು ನಿರಾಕರಿಸಿದರೂ, ಸ್ಪಾಟ್ ಫಿಕ್ಸಿಂಗ್ ಕುರಿತ ಆಂತರಿಕ ತನಿಖೆಯನ್ನು 15 ದಿನದೊಳಗೆ ಪೂರ್ಣಗೊಳಿಸುವಂತೆ ಬಿಸಿಸಿಐ ತಾಕೀತು ಮಾಡಿದೆ.