ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಹಿಂದೊಮ್ಮೆ ಭಾರತೀಯ ತಂಡದ ನಾಯಕತ್ವ ವಹಿಸಿಕೊಂಡಿದ್ದ ಸಂದರ್ಭದಲ್ಲಿ ತಂಡದ ಹೀನಾಯ ಪ್ರದರ್ಶನದಿಂದ ಬೆಸತ್ತು ತಮ್ಮ ಕಪ್ತಾನಗಿರಿಗೆ ರಾಜೀನಾಮೆ ನೀಡಲು ಮುಂದಾಗಿದ್ದರು. ಆದರೆ ಇಂತಹ ಸಂದರ್ಭದಲ್ಲಿ ಸಚಿನ್ ಮನವೊಲಿಸಲು ಪತ್ನಿ ಅಂಜಲಿ ಅವರಿಂದ ಮಾತ್ರ ಸಾಧ್ಯವಾಗಿತ್ತು ಎಂದು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಮಾಜಿ ಕಾರ್ಯದರ್ಶಿ ಜಯವಂತ್ ಲೇಲೆ ನೂತನವಾಗಿ ಬಿಡುಗಡೆ ಮಾಡಿರುವ 'ಐ ವಾಸ್ ದೇರ್- ಮೆಮೋರೀಸ್ ಆಫ್ ಎ ಕ್ರಿಕೆಟ್ ಆಡ್ಮಿನಿಸ್ಟ್ರೇಟರ್' ಪುಸ್ತಕದಲ್ಲಿ ಬರೆದಿದ್ದಾರೆ.
ನಾಯಕತ್ವದಲ್ಲಿ ಸಚಿನ್ ಯಶಸ್ವಿಯಾಗಿರಲಿಲ್ಲ. ಇದರಂತೆ 1999-2000ನೇ ಋತುವಿನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ತವರಿನಲ್ಲಿ ನಡೆದ ಸರಣಿಯಲ್ಲಿ ಭಾರತ ತೀರಾ ಕಳಪೆ ಮಟ್ಟದ ಪ್ರದರ್ಶನ ನೀಡಿತ್ತು. ಮೊದಲ ಪಂದ್ಯವನ್ನು ಬಹುತೇಕ ಮೂರು ದಿನಗಳಲ್ಲೇ ಭಾರತ ಕಳೆದುಕೊಂಡಿತ್ತು.
ಇದರಿಂದ ಮಾನಸಿಕವಾಗಿ ತೀವ್ರ ನೊಂದಿದ್ದ ಸಚಿನ್ ತಮ್ಮ ರಾಜೀನಾಮೆಗೆ ಮುಂದಾಗಿದ್ದರು. ಆದರೆ ಬೆಂಗಳೂರಿನಲ್ಲಿ ನಡೆಯಲಿರುವ ಎರಡನೇ ಪಂದ್ಯಕ್ಕೆ ಕೆಲವೇ ದಿನಗಳಿರುವಾಗ ಸಚಿನ್ ಅವರ ಇಂತಹದೊಂದು ನಿರ್ಧಾರವು ಭಾರಿ ಆಘಾತ ತರುವಂತಾಗಿತ್ತು.
ಇಂತಹ ಪರಿಸ್ಥಿತಿಯಲ್ಲಿ ಸಚಿನ್ ಮನವೊಲಿಸಲು ಬಿಸಿಸಿಐ ಮುಖ್ಯಸ್ಥ ರಾಜಸಿಂಗ್ ಡುಂಗರ್ಪುರ್ ಹಾಗೂ ಮಾಜಿ ಆಲ್ರೌಂಡರ್ ರವಿ ಶಾಸ್ತ್ರಿ ಯತ್ನಿಸಿದ್ದರೂ ಸಹ ವಿಫಲವಾಗಿದ್ದರು. ಆದರೆ ಕೊನೆಗೆ ಅಂಜಲಿ ಕೋರಿಕೆಯ ನಂತರ ಸಚಿನ್ ತಮ್ಮ ನಿರ್ಧಾರ ವಾಪಾಸ್ ಪಡೆಯುವಂತಾಗಿತ್ತು ಎಂದು ಪುಸ್ತಕದಲ್ಲಿ ಬರೆಯಲಾಗಿದೆ.