ವಿಶ್ವಕಪ್ ವಿಜೇತ ಭಾರತ ಕ್ರಿಕೆಟ್ ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ ಹಾಗೂ ಒಲಿಂಪಿಕ್ ಸ್ವರ್ಣ ಪದಕ ವಿಜೇತ ಶೂಟರ್ ಅಭಿನವ್ ಬಿಂದ್ರಾ ಅವರಿಗೆ ಭಾರತೀಯ ಭೂಸೇನೆಯ ಗೌರವ ಲೆಫ್ಟಿನೆಂಟ್ ಕರ್ನಲ್ ಹುದ್ದೆಯನ್ನು ನವೆಂಬರ್ 1, ಮಂಗಳವಾರದಂದು ಪ್ರಧಾನ ಮಾಡಲಾಗುವುದು.
ದಿನಾಂಕವನ್ನು ಕೇಂದ್ರ ರಕ್ಷಣಾ ಸಚಿವಾಲಯ ಖಚಿತಪಡಿಸಿದ್ದು, ಕ್ರಮವಾಗಿ ಕ್ರಿಕೆಟ್ ಹಾಗೂ ಶೂಟಿಂಗ್ ಕ್ರೀಡೆಗಳಲ್ಲಿ ದೇಶಕ್ಕೆ ನೀಡಿರುವ ಕೊಡುಗೆಯನ್ನು ಪರಿಗಣಿಸಿ ಗೌರವಯುತ ಲೆಫ್ಟಿನೆಂಟ್ ಕರ್ನಲ್ ಶ್ರೇಣಿಯನ್ನು ಪ್ರಧಾನ ಮಾಡುತ್ತಿದೆ.
ಭಾರತೀಯ ಕ್ರಿಕೆಟ್ ತಂಡ 28 ವರ್ಷಗಳ ನಂತರ ವಿಶ್ವಕಪ್ ಗೆಲ್ಲುವಲ್ಲಿ ಮಹೇಂದ್ರ ಸಿಂಗ್ ಧೋನಿ ಪ್ರಮುಖ ಪಾತ್ರ ವಹಿಸಿದ್ದರು. ಅಲ್ಲದೆ ಭಾರತದ ಹಲವು ಐತಿಹಾಸಿಕ ಗೆಲುವಿನಲ್ಲಿ ಧೋನಿ ಮಹತ್ತರ ಕೊಡುಗೆ ನೀಡಿದ್ದರು. ಅತ್ತ ಶೂಟಿಂಗ್ ವಿಭಾಗದಲ್ಲೂ ಬಿಂದ್ರಾ ದೇಶಕ್ಕಾಗಿ ಅಮೋಘ ಸೇವೆಯನ್ನೇ ಸಲ್ಲಿಸಿದ್ದಾರೆ. 2008ರಲ್ಲಿ ಚೀನಾದಲ್ಲಿ ಬೀಜಿಂಗ್ನಲ್ಲಿ ನಡೆದ ಒಲಿಂಪಿಕ್ಸ್ನಲ್ಲಿ ಶೂಟಿಂಗ್ ವಿಭಾಗದಲ್ಲಿ ಚಿನ್ನ ಗೆದ್ದಿದ್ದ ಬಿಂದ್ರಾ ಜಗತ್ತಿನಲ್ಲೇ ದೇಶದ ಕೀರ್ತಿ ಪತಾಕೆಯನ್ನು ಎತ್ತಿ ಹಿಡಿದಿದ್ದರು.
ಈ ಹಿಂದೆ ಭಾರತದ ಚೊಚ್ಚಲ ವಿಶ್ವಕಪ್ ವಿಜೇತ ನಾಯಕ ಕಪಿಲ್ ದೇವ್ ಹಾಗೂ ದಾಖಲೆಗಳ ಸರದಾರ ಸಚಿನ್ ತೆಂಡೂಲ್ಕರ್ ಸಹ ಸೇನೆಯ ಗೌರವ ಹುದ್ದೆಯನ್ನು ಪಡೆದಿದ್ದರು. ಕಪಿಲ್ ದೇವ್ ಭೂಸೇನೆಯ ಗೌರವ ಲೆಫ್ಟಿನೆಂಟ್ ಕರ್ನಲ್ ಆಗಿದ್ದರೆ, ಲಿಟ್ಲ್ ಮಾಸ್ಟರ್ ವಾಯುಸೇನೆಯ ಗೌರವ್ ಗ್ರೂಪ್ ಕ್ಯಾಪ್ಟನ್ ಹುದ್ದೆ ಆಲಂಕರಿಸಿದ್ದಾರೆ.