ನವದೆಹಲಿ: ಐಪಿಎಲ್ ಬೆಟ್ಟಿಂಗ್ ಮತ್ತು ಫಿಕ್ಸಿಂಗ್ ಹಗರಣದ ತನಿಖೆ ನಡೆಸುತ್ತಿರುವ ಮುದ್ಗಲ್ ಸಮಿತಿಯ ಮುಂದೆ ಎಂ.ಎಸ್.ಧೋನಿ ನೀಡಿದ ಹೇಳಿಕೆಯನ್ನು ಪರಿಶೀಲಿಸಲು ಅವಕಾಶ ನೀಡಬೇಕೆಂದು ಬಿಸಿಸಿಐ ಸುಪ್ರೀಂಕೋರ್ಟ್ಗೆ ಅರ್ಜಿ ಸಲ್ಲಿಸಿದೆ. ಭಾರತ ತಂಡದ ನಾಯಕ ಧೋನಿ, ಎನ್. ಶ್ರೀನಿವಾಸನ್ ಮತ್ತು ಐಪಿಎಲ್ ಸಿಒಒ ಸುಂದರ್ ರಾಮನ್ ಅವರ ಧ್ವನಿಮುದ್ರಿಕೆ ದಾಖಲೆಗಳನ್ನು ಪರಿಶೀಲಿಸಲು ಬಿಸಿಸಿಐ ಬಯಸಿದೆ. ಸುಪ್ರೀಂಕೋರ್ಟ್ ವಿಚಾರಣೆಯನ್ನು ಶುಕ್ರವಾರಕ್ಕೆ ಮುಂದೂಡಿದೆ.
ಬಿಹಾರ ಕ್ರಿಕೆಟ್ ಸಂಸ್ಥೆಯ ಆದಿತ್ಯ ವರ್ಮ ಅವರನ್ನು ಪ್ರತಿನಿಧಿಸುವ ಹಿರಿಯ ವಕೀಲ ಹರೀಶ್ ಸಾಳ್ವೆ ಧೋನಿ ಸುಳ್ಳು ಹೇಳಿದ್ದಾರೆಂದು ಆರೋಪಿಸಿದ್ದರು. ಬೆಟ್ಟಿಂಗ್ ಮತ್ತು ಮ್ಯಾಚ್ ಫಿಕ್ಸಿಂಗ್ ಹಗರಣದಲ್ಲಿ ಶ್ರೀನಿವಾಸನ್ ಅಳಿಯ ಗುರುನಾಥ್ ಮೆಯಪ್ಪನ್ ಪಾತ್ರದ ಬಗ್ಗೆ ಧೋನಿ ಸುಳ್ಳು ಹೇಳಿದ್ದಾರೆಂದು ಸಾಳ್ವೆ ವಾದಿಸಿದ್ದರು. ಧೋನಿ ಸುಳ್ಳು ಹೇಳುವ ಅಗತ್ಯವಿರಲಿಲ್ಲ ಮತ್ತು ಐಪಿಎಲ್ ಅಕ್ರಮಗಳ ಬಗ್ಗೆ ಸ್ವತಂತ್ರ ತನಿಖೆಯನ್ನು ಹಮ್ಮಿಕೊಳ್ಳುವುದು ಅಗತ್ಯ ಎಂದು ಸಾಳ್ವೆ ಹೇಳಿದರು.ಆದರೆ ಬಿಸಿಸಿಐ ಧೋನಿಯನ್ನು ಸಮರ್ಥಿಸಿಕೊಂಡು ಅವರು ಯಾವುದೇ ತಪ್ಪು ಮಾಡಿಲ್ಲ ಮತ್ತು ಅಮಾಯಕರು ಎಂದು ಹೇಳಿತ್ತು.