Select Your Language

Notifications

webdunia
webdunia
webdunia
webdunia

ಧೋನಿ ತರಾತುರಿ ವಿವಾಹಕ್ಕೆ ಜ್ಯೋತಿಷ್ಯ ಕಾರಣವಂತೆ!

ಧೋನಿ ತರಾತುರಿ ವಿವಾಹಕ್ಕೆ ಜ್ಯೋತಿಷ್ಯ ಕಾರಣವಂತೆ!
ನವದೆಹಲಿ , ಸೋಮವಾರ, 5 ಜುಲೈ 2010 (18:48 IST)
ಈಗಷ್ಟೇ ಮದುವೆಯಾಗಿರುವ ಟೀಮ್ ಇಂಡಿಯಾ ಕಪ್ತಾನ ಮಹೇಂದ್ರ ಸಿಂಗ್ ಧೋನಿ ವಾಸ್ತವದಲ್ಲಿ ಮುಂದಿನ ವರ್ಷ ಮದುವೆಯಾಗುವ ಲೆಕ್ಕಾಚಾರ ಹಾಕಲಾಗಿತ್ತು. ಆದರೆ ಜ್ಯೋತಿಷಿಗಳ ಸಲಹೆ ಹಿನ್ನೆಲೆಯಲ್ಲಿ ಮದುವೆ ದಿನಾಂಕವನ್ನು ಬದಲಾವಣೆ ಮಾಡಿ ಈಗಿಂದೀಗಲೇ ನಡೆಸಲಾಯಿತು ಎಂದು ಹೇಳಲಾಗಿದೆ.

ಭಾನುವಾರ ರಾತ್ರಿ ಡೆಹ್ರಾಡೂನ್‌ನಲ್ಲಿನ ತೋಟದ ಮನೆಯಲ್ಲಿ ನಡೆದ ಮದುವೆಯಲ್ಲಿ ಪಾಲ್ಗೊಂಡ ಮೂಲವೊಂದರ ಪ್ರಕಾರ ಈ ಮದುವೆ 2011ರಲ್ಲಿ ನಡೆಯಬೇಕಿತ್ತು. ಆದರೆ ಕೆಲವು ಪ್ರಮುಖ ಕಾರಣಗಳಿಂದಾಗಿ ಮದುವೆಯನ್ನು ಇದೇ ವರ್ಷ ನಡೆಸಲು ನಿರ್ಧರಿಸಲಾಯಿತು.
PTI

ಜುಲೈ 7ರಂದು 29ನೇ ವರ್ಷಕ್ಕೆ ಕಾಲಿಡಲಿರುವ ಧೋನಿಗೆ ಈ ವರ್ಷ ಮಂಗಳಕರವಾಗಿರುವುದರಿಂದ ಇದೇ ವರ್ಷ ಜೋಡಿ ತಮ್ಮ ಸಂಬಂಧವನ್ನು ಧಾರ್ಮಿಕ ವಿಧಿ ವಿಧಾನಗಳ ಮೂಲಕ ವಿಧ್ಯುಕ್ತಗೊಳಿಸುವ ನಿರ್ಧಾರಕ್ಕೆ ಉಭಯ ಕುಟುಂಬಗಳು ಬಂದಿದ್ದವು ಎಂದು ಜ್ಯೋತಿಷಿಯೊಬ್ಬರು ತಿಳಿಸಿದ್ದಾರೆ.

ಜತೆಗೆ ಹಿಂದೂ ಸಂಪ್ರದಾಯದ ಪ್ರಕಾರ ಸುದೀರ್ಘ ವಿಧಿ ವಿಧಾನಗಳನ್ನು ಪೂರೈಸಲು ಮುಂಬರುವ ತಿಂಗಳುಗಳಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ವೇಳಾಪಟ್ಟಿ ಬಿಗಿಯಿರುವುದರಿಂದ ಸಾಧ್ಯವಿರಲಿಲ್ಲ. ಇದೂ ಕೂಡ ತಕ್ಷಣ ಮದುವೆ ನಡೆಸಲು ಕಾರಣವಾಯಿತು.

ಅಲ್ಲದೆ ಬಾಲಿವುಡ್ ನಟಿಯರಾದ ದೀಪಿಕಾ ಪಡುಕೋಣೆ ಮತ್ತು ಆಸಿನ್ ಹೆಸರುಗಳು ಧೋನಿ ಜತೆ ಥಳಕು ಹಾಕಿಕೊಂಡಿವೆ ಎಂಬ ಮಾಧ್ಯಮ ವರದಿಗಳ ಬಗ್ಗೆಯೂ ಸಾಕ್ಷಿ ಸಿಂಗ್ ರಾವತ್ ಕುಟುಂಬವು ತೀವ್ರ ಅಸಮಾಧಾನ ಹೊಂದಿತ್ತು. ಹಾಗಾಗಿ ಇಂತಹ ಗಾಸಿಪ್‌ಗಳಿಂದ ಮುಕ್ತಿ ಪಡೆಯಬೇಕೆಂಬ ಒತ್ತಡ ಧೋನಿ ಮೇಲಿತ್ತು.

ಇದಕ್ಕೆ ಪುಷ್ಠಿ ನೀಡಿದ್ದು ಕಳೆದ ವರ್ಷ ಭಾರತವು ಆಸ್ಟ್ರೇಲಿಯಾ ಪ್ರವಾಸ ಮಾಡಿದ್ದ ಸಂದರ್ಭದಲ್ಲಿ ದೀಪಿಕಾ ಕ್ರೀಡಾಂಗಣದ ಆಟಗಾರರ ಕೊಠಡಿಯ ಪಕ್ಕ ಕಾಣಿಸಿಕೊಂಡದ್ದು. ಈ ಕುರಿತು ಧೋನಿ ಯಾವುದೇ ಹೇಳಿಕೆಯನ್ನು ನೀಡದೇ ಇದ್ದರೂ, ಗಾಳಿಸುದ್ದಿಗಳು ಹರಡುವುದು ನಿಂತಿರಲಿಲ್ಲ.

ಒಂದೇ ಶಾಲೆಯಲ್ಲಿ ಓದಿದ್ದ ಧೋನಿ ಮತ್ತು ಸಾಕ್ಷಿ ಕಳೆದ ಮೂರು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದರೂ, ಅದನ್ನು ತಮ್ಮ ನಿಶ್ಚಿತಾರ್ಥದವರೆಗೂ ಮಾಧ್ಯಮಗಳಿಗೆ ತಿಳಿಯದಂತೆ ಮಾಡುವಲ್ಲಿ ಟೀಮ್ ಇಂಡಿಯಾ ಕಪ್ತಾನ ಯಶಸ್ವಿಯಾಗಿದ್ದರು. ಇದು ಮದುವೆಗೆ ಮೊದಲು ಬಹಿರಂಗವಾಗುವುದು ಕೂಡ ಅವರಿಗೆ ಬೇಕಿರಲಿಲ್ಲ ಎಂದು ಹೇಳಲಾಗಿದೆ.

ಹೀಗೆ ಹಲವಾರು ವಿಚಾರಗಳು ಧೋನಿ ಮತ್ತು ಸಾಕ್ಷಿ ಮದುವೆ ತರಾತುರಿಗೆ ಕಾರಣವಾಯಿತು ಎಂದು ವರದಿಗಳು ಹೇಳಿವೆ.

Share this Story:

Follow Webdunia kannada