ಶನಿವಾರ. ನವೆಂಬರ್ ಮೂರನೆ ತಾರಿಖಿನಂದು ನಡೆಯಬೇಕಿದ್ದ ಟೀಮ್ ಇಂಡಿಯಾದ ಕೋಚ್ ಆಯ್ಕೆಯ ಸಭೆಯನ್ನು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಅನಿರ್ಧಿಷ್ಟಾವಧಿಯವರೆಗೆ ತಡೆ ಹಾಕಿದೆ.
ಸುದ್ದಿಗಾರರಿಗೆ ಈ ಕುರಿತು ಮಾಹಿತಿ ನೀಡಿದ ಬಿಸಿಸಿಐ ಕಾರ್ಯದರ್ಶಿ ನಿರಂಜನ್ ಷಾ ಅವರು ಕೋಚ್ ಆಯ್ಕೆ ಸಮಿತಿಯಲ್ಲಿ ಇರುವ ಸುನಿಲ್ ಗವಾಸ್ಕರ್ ಅವರು ನವೆಂಬರ್ 3ರ ಸಭೆಗೆ ಅನುಪಸ್ಥಿತರಾಗುವುದರಿಂದ ಸಭೆಯನ್ನು ಅನಿರ್ಧಿಷ್ಟಾವಧಿಯವರೆಗೆ ಮುಂದೂಡಲಾಗಿದೆ ಎಂದು ಅವರು ಹೇಳಿದರು.
ಇನ್ನೊಂದು ಮೂಲಗಳ ಪ್ರಕಾರ ಈಗಾಗಲೇ ಟೀಮ್ ಇಂಡಿಯಾದ ಕೋಚ್ ಹುದ್ದೆಗೆ ಅರ್ಜಿ ಸಲ್ಲಿಸಿರುವವರ ಪಟ್ಟಿಯಲ್ಲಿ ಸೂಕ್ತ ಅಭ್ಯರ್ಥಿ ಇಲ್ಲದಿರುವ ಕಾರಣ ಸಭೆಯನ್ನು ಮುಂದೂಡಿರುವ ಸಾಧ್ಯತೆ ಇದೆ ಎಂದು ವರದಿ ಮಾಡಿವೆ.
ಒಂದು ಪಕ್ಷ ಸುನಿಲ್ ಗವಾಸ್ಕರ್ ಅವರು ಸಭೆಗೆ ಬಂದರೂ ಎಲ್ಲಿ ಅಭ್ಯರ್ಥಿ ಎಂಬ ಪ್ರಶ್ನೆ ಎದುರಾಗುವ ಸಾಧ್ಯತೆ ಇದ್ದು, ಪಾಕ್ ವಿರುದ್ಧ ಟೆಸ್ಟ್ ಸರಣಿ ಪ್ರಾರಂಭವಾಗುವುದಕ್ಕೆ ಮುನ್ನ ಕೋಚ್ ನೇಮಕವಾಗುವುದಿಲ್ಲ, ಲಾಲಚಂದ್ ರಜಪೂತ್ ಅವರು ಈಗಾಗಲೇ ವಹಿಸಿಕೊಂಡಿರುವ ಮ್ಯಾನೆಜರ್ ಹುದ್ದೆಯಲ್ಲಿ ಮುಂದುವರಿಯುವ ಎಲ್ಲ ಲಕ್ಷಣಗಳು ಸ್ಪಷ್ಟವಾಗಿವೆ ಎಂದು ವರದಿಯಾಗಿದೆ.
ಇದೇ ಸಮಯದಲ್ಲಿ ನ್ಯಾಷನಲ್ ಕ್ರಿಕೆಟ್ ಅಕಾಡೆಮಿಯ ನಿರ್ದೇಶಕರಾಗಿರುವ ಡೆವ್ ವಾಟ್ಮೋರ್ ಅವರು ಎನ್ಸಿಎ ಅಭಿವೃದ್ದಿ ಕುರಿತಂತೆ ಕೆಲ ಸಲಹೆ ನೀಡಿದ್ದು, ಅವರು ನೀಡಿರುವ ಸಲಹೆಗಳ ಕುರಿತು ಸಭೆಯಲ್ಲಿ ಚರ್ಚಿಸಲಾಗುವುದು ಎಂದು ನಿರಂಜನ್ ಷಾ ಹೇಳಿದ್ದಾರೆ.