ಈ ಮುನ್ನ ಪಂದ್ಯದ ಆರಂಭದಲ್ಲೇ ಎರಡು ಪ್ರಮುಖ ವಿಕೆಟುಗಳನ್ನು ಕಬಳಿಸಿದ ಅನುಭವಿ ವೇಗಿ ಜಹೀರ್ ಖಾನ್ (44ಕ್ಕೆ 2 ವಿಕೆಟ್) ಅವರ ಪ್ರಭಾವಿ ದಾಳಿ ನೆರವಿನಿಂದ ಶ್ರೀಲಂಕಾ ತಂಡವನ್ನು 233 ರನ್ನುಗಳಿಗೆ ಕಟ್ಟಿ ಹಾಕುವಲ್ಲಿ ಭಾರತ ಯಶಸ್ವಿಯಾಗಿತ್ತು. ಜಹೀರ್ ಅವರಿಗೆ ಉತ್ತಮ ಸಾಥ್ ನೀಡಿದ ಆಫ್ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಮೂರು ವಿಕೆಟುಗಳನ್ನು ಕಬಳಿಸುವ ಮೂಲಕ ತಮ್ಮ ಆಯ್ಕೆಯನ್ನು ಸಮರ್ಥಿಸಿಕೊಂಡರು.
ತಿಲಕರತ್ನೆ ದಿಲ್ಶಾನ್ ರಾಜೀನಾಮೆ ನೀಡಿದ್ದರಿಂದ ಶ್ರೀಲಂಕಾ ತಂಡದ ನಾಯಕತ್ವ ಜವಾಬ್ದಾರಿಯನ್ನು ಅನುಭವಿ ಮಹೇಲಾ ಜಯವರ್ಧನೆ ವಹಿಸಿಕೊಂಡಿದ್ದಾರೆ. ಇದರಂತೆ ಟಾಸ್ ಗೆದ್ದುಕೊಂಡ ಲಂಕಾ ನಾಯಕ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡರು. ನಾಯಕತ್ವದಿಂದ ಕೆಳಗಿಳಿದ ಬೆನ್ನಲ್ಲೇ ತಮ್ಮ ಎಂದಿನ ಶೈಲಿಯಲ್ಲಿ ಬ್ಯಾಟ್ ಬೀಸಿದ ದಿಲ್ಶಾನ್ 48 ರನ್ನುಗಳ ಉಪಯುಕ್ತ ನೆರವು ನೀಡಿದರು.
ಆದರೆ ಆರಂಭದಲ್ಲೇ ಉಪುಲ್ ತರಂಗ (4) ಹಾಗೂ ವಿಕೆಟ್ ಕೀಪರ್ ಬ್ಯಾಟ್ಸ್ಮನ್ ಕುಮಾರ ಸಂಗಕ್ಕರ (48) ವಿಕೆಟ್ ಕಬಳಿಸಿದ ಜಹೀರ್ ಭಾರತಕ್ಕೆ ಆರಂಭಿಕ ಮುನ್ನಡೆ ಒದಗಿಸಿಕೊಟ್ಟಿದ್ದರು.
ಈ ನಡುವೆ ದಿನೇಶ್ ಚಾಂಧಿಮಾಲ್ ಆಕರ್ಷಕ ಅರ್ಧಶತಕ (64) ಬಾರಿಸಿದರು. ಆದರೆ ಉತ್ತಮವಾಗಿ ಮೂಡಿಬರುತ್ತಿದ್ದ ಜಯವರ್ಧನೆ 23 ರನ್ ಗಳಿಸಿ ವಿಕೆಟ್ ಓಪ್ಪಿಸಿದರು.
ಉಳಿದಂತೆ ಒಂದು ಬದಿಯಿಂದ ವಿಕೆಟ್ ಪತನಗೊಳ್ಳುತ್ತಿದ್ದರೂ ಅಜೇಯ 33 ರನ್ ಬಾರಿಸಿದ ಆಂಗಲೋ ಮ್ಯೂಥ್ಯೂಸ್ ತಂಡದ ಮೊತ್ತವನ್ನು 230ರ ಗಡಿ ದಾಟಿಸಿದರು. ಅಂತಿಮವಾಗಿ ತಂಡವು ನಿಗದಿತ 50 ಓವರುಗಳಲ್ಲಿ ಎಂಟು ವಿಕೆಟ್ ನಷ್ಟಕ್ಕೆ 233 ರನ್ ಪೇರಿಸುವಲ್ಲಿ ಯಶಸ್ವಿಯಾಯಿತು.