ಕ್ರಿಕೆಟ್ ಬಗ್ಗೆ ಕ್ರೇಜ್ ಅಭಿಮಾನ ಬೆಳೆಸಿಕೊಂಡಿದ್ದ ತಮಿಳುನಾಡಿನ ವ್ಯಕ್ತಿಯೊಬ್ಬ ನಿನ್ನೆ ನಡೆದ ಪಂದ್ಯದಲ್ಲಿ ಭಾರತ ಗೆಲ್ಲಲಿ ಎಂದು ಬಯಸಿ ನಾಲಿಗೆಯನ್ನೇ ಕತ್ತರಿಸಿಕೊಳ್ಳುವ ಮೂಲಕ ಹುಚ್ಚುತನವನ್ನು ತೋರಿದ್ದಾನೆ. ಆತನನ್ನು ಸ್ಥಳೀಯ ಆಸ್ಪತ್ರೆಗೆ ಸೇರಿಸಲಾಗಿದ್ದು ಚಿಕಿತ್ಸೆ ನೀಡಲಾಗುತ್ತಿದೆ.
ಆಸ್ಟ್ರೇಲಿಯಾ- ಭಾರತ ತಂಡದ ನಡುವೆ ನಡೆಯುತ್ತಿದ್ದ ಕ್ರಿಕೆಟ್ ಪಂದ್ಯವನ್ನು ಟಿವಿಯಲ್ಲಿ ವೀಕ್ಷಿಸುತ್ತ ಕುಳಿತಿದ್ದ ವೆಲ್ಲೂರು ಜಿಲ್ಲೆಯ ಪೊನ್ನೇರಿ ನಿವಾಸಿ ಸುಧಾಕರ್ ಆಸಿಸ್ 328 ರನ್ಗಳ ಬೃಹತ್ ಮೊತ್ತ ಪೇರಿಸುತ್ತಿದ್ದಂತೆ ಹತಾಶನಾಗಿದ್ದಾನೆ. ಬ್ಯಾಟಿಂಗ್ಗಿಳಿದ ಭಾರತ ತಂಡದ ಸದಸ್ಯರು ಪೆವಿಲಿಯನ್ಗೆ ಪೆರೆಡ್ ಮಾಡುತ್ತಿರುವುದನ್ನು ಕಂಡು ಮತ್ತೂ ಖಿನ್ನನಾದ ಆತ ಭಾರತ ಗೆಲ್ಲಲು ನೆರವಾಗು ಎಂದು ದೇವರ ಫೋಟೋ ಮುಂದೆ ಕುಳಿತು ಕೋರಿಕೊಂಡು ಅದಕ್ಕೆ ಪ್ರತಿಯಾಗಿ ಚಾಕುವಿನಿಂದ ತನ್ನ ನಾಲಿಗೆಯನ್ನೇ ಕತ್ತರಿಸಿ ದೇವರಿಗೆ ನೀಡಲು ಹೊರಟಿದ್ದಾನೆ.
ನೋವಿನಿಂದ ಕಿರುಚಿಕೊಂಡ ಆತನನ್ನು ಮನೆಯ ಸದಸ್ಯರು ಮತ್ತು ನೆರೆಹೊರೆಯವರು ಅದುಕ್ಕಂಪರೈ ಸರಕಾರಿ ಆಸ್ಪತ್ರೆಗೆ ಸಾಗಿಸಿದ್ದಾರೆ. ಪ್ರಕರಣವನ್ನು ದಾಖಲಿಸಿಕೊಂಡಿರುವ ಜೋಲಾರ್ ಪೇಟೆ ಪೊಲೀಸರು ಹತಾಶೆಯಿಂದ ಆತ ಈ ಕೃತ್ಯಕ್ಕೆ ಕೈ ಹಾಕಿದ್ದಾನೆ ಎಂದಿದ್ದಾರೆ.