ಭಾರತದ ಯುವ ಆಟಗಾರರು ಸ್ಪಿನ್ ಕೆಟ್ಟದಾಗಿ ಆಡುತ್ತಾರೆನ್ನುವುದು ತಪ್ಪು ಕಲ್ಪನೆಯಾಗಿದ್ದು, ವಾಸ್ತವವಾಗಿ ಸ್ಲೋ ಬೌಲರುಗಳ ವಿರುದ್ಧ ಶಾಟ್ ಹೊಡೆಯುವ ಸಾಮರ್ಥ್ಯ ಅವರಲ್ಲಿದೆ ಎಂದು ಮಾಜಿ ನಾಯಕ ರಾಹುಲ್ ದ್ರಾವಿಡ್ ಅಭಿಪ್ರಾಯಪಟ್ಟರು.
ಆಸ್ಟ್ರೇಲಿಯಾ ಮತ್ತು ದಕ್ಷಿಣ ಆಫ್ರಿಕಾ ಎ ತಂಡಗಳ ಜತೆ ಸುದೀರ್ಘ ಸರಣಿಯನ್ನು ಮುಗಿಸಿದ ಭಾರತ ಎ ತಂಡದ ಕೋಚ್ ದ್ರಾವಿಡ್, ಸ್ಪಿನ್ ವಿರುದ್ಧ ಶಾಟ್ ಹೊಡೆಯುವ ಸಾಮರ್ಥ್ಯಕ್ಕೆ ಸಂಬಂಧಿಸಿದಂತೆ ಈ ಪೀಳಿಗೆ ವಿಸ್ಮಯಕಾರಿಯಾಗಿದೆ. ಸ್ಪಿನ್ ವಿರುದ್ಧ ಕೆಲವು ಆಟಗಾರರ ಸೃಜನಶೀಲತೆ ಅತ್ಯುತ್ಕೃಷ್ಟವಾಗಿದೆ. ಆದರೆ ಕೆಲವು ಬಾರಿ ಸಮತೋಲನ ಇಲ್ಲದಿರುವುದು ಭಾರತದ ಕ್ರಿಕೆಟ್ಗೆ ಸ್ವಲ್ಪ ಕಳವಳಕಾರಿಯಾಗಿದೆ ಎಂದು ಹೇಳಿದ್ದಾರೆ.
ಆಸ್ಟ್ರೇಲಿಯಾ ಎ ವಿರುದ್ಧ ಎರಡು ಪಂದ್ಯಗಳ ಸರಣಿಯಲ್ಲಿ ಸೋತಿದ್ದ ಭಾರತ ಎ ಅದೇ ಎದುರಾಳಿ ವಿರುದ್ಧ ತ್ರಿಕೋನ ಸರಣಿ ಫೈನಲ್ನಲ್ಲಿ ಗೆದ್ದು ಸೇಡುತೀರಿಸಿಕೊಂಡಿತ್ತು.
ಯುವ ಕ್ರಿಕೆಟಿಗರು ದೀರ್ಘ ಸ್ವರೂಪದ ಕ್ರಿಕೆಟ್ ಆಡಲು ಹೆಣಗುತ್ತಾರೆಂಬ ಪರಿಕಲ್ಪನೆಯನ್ನು ತಳ್ಳಿಹಾಕಿ, ಡಿ ವಿಲಿಯರ್ಸ್, ವಿರಾಟ್ ಕೊಹ್ಲಿ ಮತ್ತು ಸ್ಟೀವನ್ ಸ್ಮಿತ್ ಮುಂತಾದ ದೀರ್ಘ ಸ್ವರೂಪದ ಕ್ರಿಕೆಟ್ ಆಟಗಾರರಿದ್ದು, ಅವರು ಟಿ 20 ಯ ಉತ್ತಮ ಆಟಗಾರರಾಗಿ ದೀರ್ಘ ಸ್ವರೂಪದ ಕ್ರಿಕೆಟ್ ಕೂಡ ಚೆನ್ನಾಗಿ ಆಡುತ್ತಾರೆ ಎಂದು ದ್ರಾವಿಡ್ ಪ್ರತಿಕ್ರಿಯಿಸಿದರು.