ಧರ್ಮಶಾಲಾ: ಅಂತಿಮ ಪಂದ್ಯಕ್ಕೊಂದು ಫೈನಲ್ ಕಳೆ ಬಂದರೆ ಏನಾಗುತ್ತದೆ? ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ನಾಲ್ಕನೇ ಟೆಸ್ಟ್ ಪಂದ್ಯದಲ್ಲೂ ಅದೇ ಜಿದ್ದಾ ಜಿದ್ದಿನ ಹೋರಾಟ ಕಾಣಿಸುತ್ತಿದೆ.
ಎರಡನೇ ದಿನದಂತ್ಯಕ್ಕೆ ಭಾರತ 6 ವಿಕೆಟ್ ನಷ್ಟಕ್ಕೆ 248 ರನ್ ಗಳಿಸಿದ್ದು, ಆಸ್ಟ್ರೇಲಿಯಾದ ಮೊದಲ ಇನಿಂಗ್ಸ್ ಮೊತ್ತ ದಾಟಲು ಇನ್ನೂ 52 ರನ್ ಬೇಕಾಗಿದೆ. ಇಂದೂ ಕೂಡಾ ಭಾರತಕ್ಕೆ ಮೊನ್ನೆಯ ಸ್ಟಾರ್ ಜೋಡಿಗಳೇ ನೆರವಾದರು. ರಾಹುಲ್ ಮತ್ತೊಂದು ಅರ್ಧಶತಕ ಗಳಿಸಿ ಎಂದಿನಂತೆ ಔಟಾದರು. ಚೇತೇಶ್ವರ ಪೂಜಾರ ಕೂಡಾ 57 ರನ್ ಗಳಿಸಿ ತಂಡಕ್ಕೆ ಆಸರೆಯಾದರು.
ಈ ಪಂದ್ಯದಲ್ಲಿ ನಾಯಕನಾಗಿ ಕಣಕ್ಕಿಳಿದಿರುವ ಅಜಿಂಕ್ಯಾ ರೆಹಾನೆ ಉತ್ತಮವಾಗಿ ಆಡುತ್ತಿದ್ದರೂ, 46 ರನ್ ಗಳಿಸುವಷ್ಟರಲ್ಲಿ ಔಟಾದರು. ಈ ಸಂದರ್ಭದಲ್ಲಿ ಭಾರತ ಕೊಂಚ ಒತ್ತಡಕ್ಕೆ ಸಿಲುಕಿತು. ಆದರೆ ರವಿಚಂದ್ರನ್ ಅಶ್ವಿನ್ 30 ರನ್ ಗಳಿಸಿ ಮತ್ತೆ ಭಾರತ ಚೇತರಿಸುವಂತೆ ಮಾಡಿದರು. ದಿನದಂತ್ಯಕ್ಕೆ ವೃದ್ಧಿಮಾನ್ ಸಹಾ 10 ಮತ್ತು ರವೀಂದ್ರ ಜಡೇಜಾ 16 ರನ್ ಗಳಿಸಿ ಕ್ರೀಸ್ ನಲ್ಲಿದ್ದಾರೆ.
ಎರಡನೇ ದಿನಕ್ಕೇ ಪಿಚ್ ಬೌಲರ್ ಗಳಿಗೆ ಸಹಕಾರಿಯಾಗುತ್ತಿದ್ದು, ಭಾರತ ಕನಿಷ್ಠ 30 ರನ್ ಮುನ್ನಡೆ ಸಾಧಿಸಿದರೂ, ನಿರ್ಣಾಯಕವಾಗಲಿದೆ. ಆಸ್ಟ್ರೇಲಿಯಾ ಪರ ನಥನ್ ಲಿಯಾನ್ ಅಪಾಯಕಾರಿಯಾಗಿದ್ದು, ನಾಲ್ಕು ವಿಕೆಟ್ ಕಿತ್ತಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ
ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ