ನವದೆಹಲಿ: ಬಿಸಿಸಿಐಗೆ ಹೊಸ ವರ್ಷದ ಶುರುವಿನಲ್ಲೇ ಸುಪ್ರೀಂ ಕೋರ್ಟ್ ದೊಡ್ಡ ಮರ್ಮಾಘಾತ ನೀಡಿದೆ. ಸುಳ್ಳು ಅಫಿಡವಿಟ್ ಸಲ್ಲಿಸಿದ ಪ್ರಕರಣದಲ್ಲಿ ಅಧ್ಯಕ್ಷ ಅನುರಾಗ್ ಠಾಕೂರ್ ಮತ್ತು ಕಾರ್ಯದರ್ಶಿ ಅಜಯ್ ಶಿರ್ಕೆ ಅವರನ್ನು ವಜಾಗೊಳಸಿದೆ.
ಇದರೊಂದಿಗೆ ವಿಶ್ವದ ಶ್ರೀಮಂತ ಕ್ರಿಕೆಟ್ ಮಂಡಳಿಗೆ ಸುಪ್ರೀಂ ಕೋರ್ಟ್ ಹೊಸದಾಗಿ ಪದಾದಿಕಾರಿಗಳನ್ನು ನೇಮಿಸಲಿದೆ. ಅಲ್ಲದೆ ಲೋಧಾ ಸಮಿತಿ ವರದಿ ಜಾರಿಗೆ ನಿರಾಕರಿಸುತ್ತಿದ್ದ, ಎಲ್ಲಾ ರಾಜ್ಯ ಕ್ರಿಕೆಟ್ ಅಸೋಸಿಯೇಷನ್ ಅಧ್ಯಕ್ಷರೂ ಅಧಿಕಾರ ಕಳೆದುಕೊಳ್ಳಲಿದ್ದಾರೆ.
ಅಲ್ಲದೆ 70 ವರ್ಷಕ್ಕಿಂತ ಮೇಲ್ಪಟ್ಟ ಪದಾದಿಕಾರಿಗೂ ಅಧಿಕಾರ ತ್ಯಜಿಸಬೇಕಾಗುತ್ತದೆ. ಇದರೊಂದಿಗೆ ಸುಪ್ರೀಂ ಕೋರ್ಟ್ ಇದೇ ಮೊದಲ ಬಾರಿಗೆ ಸ್ವಾಯತ್ತ ಸಂಸ್ಥೆಯಾಗಿ ಮೆರೆಯುತ್ತಿದ್ದ ಬಿಸಿಸಿಐಗೆ ಅಂಕುಶ ಹಾಕಿದೆ. ಆದರೆ ಕ್ರಿಕೆಟ್ ಸಂಬಂಧಿತ ಚಟುವಟಿಕೆಗಳಿಗೆ ಯಾವುದೇ ಸಮಸ್ಯೆಯಾಗುವುದಿಲ್ಲ. ಲೋಧಾ ಸಮಿತಿ ಜಾರಿಗೆ ಸಂಬಂಧಿಸಿದಂತೆ ಬಿಸಿಸಿಐ ಅಧ್ಯಕ್ಷ ಅನುರಾಗ್ ಠಾಕೂರ್ ಸುಳ್ಳು ಅಫಿಡವಿಟ್ ಸಲ್ಲಿಸಿದ್ದರೆಂದು ಅವರ ಮೇಲೆ ಆರೋಪವಿದೆ.
ಇದೇ ವೇಳೆ ಮಾತನಾಡಿದ ಉಚ್ಛಾಟಿತ ಬಿಸಿಸಿಐ ಕಾರ್ಯದರ್ಶಿ ಅಜಯ್ ಶಿರ್ಕೆ ತೀರ್ಪಿನ ಬಗ್ಗೆ ಯಾವುದೇ ತಕರಾರು ಇಲ್ಲ ಎಂದಿದ್ದಾರೆ. ಆದರೆ ಅನುರಾಗ್ ಠಾಕೂರ್ ಗೆ ಮತ್ತಷ್ಟು ಸಂಕಷ್ಟ ಎದುರಾಗುವ ಸಾಧ್ಯತೆಯಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ