ಮಾಜಿ ಬಿಸಿಸಿಐ ಅಧ್ಯಕ್ಷ ಮತ್ತು ಪ್ರಸಕ್ತ ಐಸಿಸಿ ಚೇರ್ಮನ್ ಎನ್. ಶ್ರೀನಿವಾಸನ್ ಐಸಿಸಿ ಅಧ್ಯಕ್ಷ ಮುಸ್ತಫಾ ಕಮಲ್ ಅವರನ್ನು ಬದಿಗೊತ್ತಿ ವಿಶ್ವಕಪ್ ಟ್ರೋಫಿಯನ್ನು ನಾಯಕ ಮೈಕೇಲ್ ಕ್ಲಾರ್ಕ್ ಅವರಿಗೆ ಹಸ್ತಾಂತರಿಸಿದರು. ಭಾರತದ ವಿರುದ್ಧ ಬಾಂಗ್ಲಾ ಪಂದ್ಯದಲ್ಲಿ ವಿವಾದಾತ್ಮಕ ಅಂಪೇರ್ ತೀರ್ಪುಗಳ ವಿರುದ್ಧ ಅಧ್ಯಕ್ಷ ಮುಸ್ತಾಫಾ ಕಮಲ್ ಆಕ್ರೋಶ ವ್ಯಕ್ತಪಡಿಸಿದ್ದರಿಂದ ಶ್ರೀನಿವಾಸನ್ ಅಸಮಾಧಾನಗೊಂಡಿದ್ದರು.
ಸಂಪ್ರದಾಯದ ಪ್ರಕಾರ, ಐಸಿಸಿ ಅಧ್ಯಕ್ಷ ಮುಸ್ತಫಾ ಕಮಲ್ ಟ್ರೋಫಿಯನ್ನು ನಾಯಕನಿಗೆ ಹಸ್ತಾಂತರಿಸಬೇಕಿತ್ತು. ಬಾಂಗ್ಲಾ ಮೂಲದವರಾದ ಕಮಲ್'' ಅಂಪೇರ್ಗಳು ಪಕ್ಷಪಾತ ಮಾಡಿದರು. ನಮ್ಮ ರಾಷ್ಟ್ರವನ್ನು ಪಂದ್ಯಾವಳಿಯಿಂದ ದೂಡುವ ಉದ್ದೇಶಪೂರ್ವಕ ಪ್ರಯತ್ನ ಎಂದು ಟೀಕಿಸಿದ್ದರು. ಮಾನವ ತಪ್ಪುಗಳು ಸಾಧ್ಯ. ಆದರೆ ಬಾಂಗ್ಲಾದೇಶದ ವಿರುದ್ಧ ಹತ್ತಾರು ತೀರ್ಪುಗಳು ಹೇಗೆ ಬರುತ್ತವೆ? ಇದು ನಿಜವಾಗಲೂ ಕಳಪೆ ಅಂಪೈರಿಂಗ್'' ಎಂದು ಕಿಡಿಕಾರಿದ್ದರು.
ಆದರೆ ಬಿಸಿಸಿಐ ಮತ್ತು ಐಸಿಸಿ ಮುಖ್ಯ ಎಕ್ಸಿಕ್ಯೂಟಿವ್ ಡೇವಿಡ್ ರಿಚರ್ಡ್ಸನ್ ಇಬ್ಬರೂ ಈ ಆರೋಪಗಳನ್ನು ತಳ್ಳಿಹಾಕಿದ್ದರು. ಹಿಂದಿನ ವಿಶ್ವಕಪ್ ಆವೃತ್ತಿಗಳಲ್ಲಿ ವಿಜೇತ ನಾಯಕನಿಗೆ ಐಸಿಸಿ ಅಧ್ಯಕ್ಷರು ಟ್ರೋಫಿಯನ್ನು ಹಸ್ತಾಂತರಿಸುತ್ತಿದ್ದರು. 2011ರಲ್ಲಿ ಆಗಿನ ಅಧ್ಯಕ್ಷ ಶರದ್ ಪವಾರ್ ವಿಜೇತ ಭಾರತ ತಂಡದ ನಾಯಕ ಧೋನಿಗೆ ಟ್ರೋಫಿಯನ್ನು ಹಸ್ತಾಂತರಿಸಿದ್ದರು.