ಕಾನ್ಪುರ: ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವೆ ಕಾನ್ಪುರದಲ್ಲಿ ನಡೆಯುತ್ತಿರುವ ಮೂರನೇ ಟೆಸ್ಟ್ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾದ ಸ್ಪಿನ್ ಮೋಡಿಗೆ ಶರಣಾದ ಭಾರತ ಕೇವಲ 215 ರನ್ಗಳಿಗೆ ತನ್ನ ಎಲ್ಲಾ ವಿಕೆಟ್ ಕಳೆದುಕೊಂಡಿದೆ. ಸೈಮನ್ ಹಾರ್ಮರ್ ಮತ್ತು ಮಾರ್ನೆ ಮಾರ್ಕೆಲ್ ಅವರ ಸ್ಪಿನ್ ದಾಳಿಗೆ ತತ್ತರಿಸಿದ ಭಾರತ ಬೇಗನೇ ವಿಕೆಟ್ಗಳನ್ನು ಕಳೆದುಕೊಂಡು ದಕ್ಷಿಣ ಆಫ್ರಿಕಾಗೆ ಈ ಪಂದ್ಯ ಗೆಲ್ಲುವುದಕ್ಕೆ ಉತ್ತಮ ಅವಕಾಶ ಕಲ್ಪಿಸಿದೆ.
ದಕ್ಷಿಣ ಆಫ್ರಿಕಾ ಭಾರತದ ಸ್ಪಿನ್ ದಾಳಿ ಹೇಗೆ ಎದುರಿಸುತ್ತದೆ ಎಂಬ ಆಧಾರದ ಮೇಲೆ ಅದರ ಯಶಸ್ಸು ಅವಲಂಬಿಸಿದೆ. ಭಾರತದ ಸ್ಕೋರ್ 50 ರನ್ಗಳಾಗಿದ್ದಾಗ ಧವನ್ ಎಲ್ಗರ್ ಬೌಲಿಂಗ್ನಲ್ಲಿ ಅವರಿಗೇ ಕ್ಯಾಚಿತ್ತು ಔಟಾದರು. ವಿಜಯ್ ಮಾರ್ಕೆಲ್ ಬೌಲಿಂಗ್ನಲ್ಲಿ ಎಲ್ಬಿಡಬ್ಲ್ಯುಗೆ ಬಲಿಯಾದ ಬಳಿಕ ಪೂಜಾರಾ ಕೂಡ ಹಾರ್ಮರ್ ಬೌಲಿಂಗ್ನಲ್ಲಿ ಎಲ್ಬಿಡಬ್ಲ್ಯುಗೆ ಬಲಿಯಾದರು. ನಂತರ ಆಡಲಿಳಿದ ರೆಹಾನೆ ಹಾರ್ಮರ್ ಬಾಲ್ನಲ್ಲಿ ಒಂದು ಸಿಕ್ಸರ್ ಬಾರಿಸಿದ್ದರೂ ಕೂಡ ಮಾರ್ಕೆಲ್ಗೆ ಬೌಲ್ಡ್ ಆಗಿ ಪೆವಿಲಿಯನ್ ಸೇರಿದರು. ವಿರಾಟ್ ಕೊಹ್ಲಿ ಕೂಡ ಮಾರ್ಕೆಲ್ ಬೌಲಿಂಗ್ನಲ್ಲಿ ಡೇನ್ ವಿಲಾಸ್ಗೆ ಕ್ಯಾಚಿತ್ತು ಔಟಾದರು.
ರೋಹಿತ್ ಶರ್ಮಾ ಹಾರ್ಮರ್ ಎಸೆತದಲ್ಲಿ ಡಿ ವಿಲಿಯರ್ಸ್ಗೆ ಕ್ಯಾಚಿತ್ತು ಔಟಾದರು. ರೋಹಿತ್ ತಲೆಆಡಿಸುತ್ತಾ ನಿರಾಶೆಯಿಂದ ಪೆವಿಲಿಯನ್ಗೆ ಮರಳಿದರು. ವೃದ್ಧಿಮಾನ್ ಸಹಾ ಬಹಳ ನಿಧಾನಗತಿಯಲ್ಲಿ ಸ್ಕೋರ್ ಮಾಡಿ 106 ಎಸೆತಗಳಲ್ಲಿ 32 ರನ್ ಗಳಿಸಿ ಔಟಾದರು. ರವೀಂದ್ರ ಜಡೇಜಾ 54 ಎಸೆತಗಳಲ್ಲಿ 34 ರನ್ ಕಲೆಹಾಕಿ ತಮ್ಮ ಬ್ಯಾಟಿಂಗ್ ಕೌಶಲ್ಯ ಪ್ರದರ್ಶಿಸಿದರು.