ವಿಶಾಖಪಟ್ಟಣಂ: ಮತ್ತೊಂದು ಸೊಗಸಾದ ಇನಿಂಗ್ಸ್.. ಸಂಕಟ ಬಂದಾಗಲೆಲ್ಲಾ ಟೀಂ ಇಂಡಿಯಾಕ್ಕೆ ವಿರಾಟ್ ಕೊಹ್ಲಿಯೇ ಆಧಾರ ಎನ್ನುವುದನ್ನು ಮತ್ತೊಮ್ಮೆ ಸಾಬೀತುಪಡಿಸಿದ ಮನಮೋಹಕ ಆಟವದು. ಇಂದು ಕೊಹ್ಲಿಯ ಎಂದಿನ ಅಬ್ಬರವಿರಲಿಲ್ಲ. ಶತಕ ಬಾರಿಸಿದ ಮೇಲೆಯೂ ಪಂಚ್ ಮಾಡಿ ಕುಣಿದಾಡುವ ಮನಸ್ಸಿರಲಿಲ್ಲ. ಇನಿಂಗ್ಸ್ ಕಟ್ಟುವ ದೃಢತೆ ಕೊಹ್ಲಿಯ ಮುಖದಲ್ಲಿ ಸ್ಪಷ್ಟವಾಗಿತ್ತು.
ಅದರಂತೇ ಮೊದಲ ದಿನದ ಆಟ ಮುಗಿದಾಗ ಅವರಿನ್ನೂ 151 ರನ್ ಗಳಿಸಿ ಅಜೇಯರಾಗಿ ಉಳಿದಿದ್ದಾರೆ. ದ್ವಿಶತಕ ಗಳಿಸಿ ಎದುರಾಳಿ ಇಂಗ್ಲೆಂಡ್ ಗೆ ಒಂದು ಬೃಹತ್ ಮೊತ್ತ ನೀಡುವ ಸೂಚನೆ ನೀಡಿದ್ದಾರೆ. ಹೀಗಾಗಿಯೇ ಭಾರತ ದಿನದಂತ್ಯಕ್ಕೆ 4 ವಿಕೆಟ್ ಕಳೆದುಕೊಂಡು 317 ರನ್ ಗಳಿಸಲು ಶಕ್ತವಾಗಿದೆ.
ನಾಳೆಯೂ ಕೊಹ್ಲಿ ಇದೇ ದೃಢ ಚಿತ್ತದಲ್ಲಿದ್ದರೆ ಮಧ್ಯಾಹ್ನದ ಮೊದಲು ಮೊತ್ತ 500 ದಾಟುವುದು ಖಂಡಿತಾ. ಅದಕ್ಕೆ ಆಲ್ ರೌಂಡರ್ ಅಶ್ವಿನ್, ರವೀಂದ್ರ ಜಡೇಜಾ, ಕೀಪರ್ ವೃದ್ಧಿಮಾನ್ ಸಹಾ ಸಾಥ್ ಕೊಡಬೇಕಷ್ಟೆ.
ಇಂಗ್ಲೆಂಡ್ ತಂಡಕ್ಕೆ ವಾಪಸಾಗಿರುವ ಜೇಮ್ಸ್ ಆಂಡರ್ಸನ್ ಕೊಂಚ ಅಪಾಯಕಾರಿ ಎನಿಸುವ ಸೂಚನೆ ನೀಡಿದ್ದಾರೆ. ಈಗಾಗಲೇ ಅವರು ಮೂರು ವಿಕೆಟ್ ಕಿತ್ತಿದ್ದಾರೆ. ನಾಳೆ ಬೆಳಗಿನ ಅವಧಿ ಬೌಲರ್ ಗಳಿಗೆ ನೆರವು ನೀಡಿದರೆ ಭಾರತಕ್ಕೆ ಮೊತ್ತ ಉಬ್ಬಿಸುವುದು ಕೊಂಚ ಕಷ್ಟವಾಗಬಹುದು. ಆದರೂ ತಾಳ್ಮೆಯ ಆಟವಾಡಿದರೆ ಇಲ್ಲಿ ಮೇಲುಗೈ ಸಾಧ್ಯ ಎನ್ನುವುದನ್ನು ಶತಕ ವೀರರಾದ ಚೇತೇಶ್ವರ ಪೂಜಾರ ಮತ್ತು ಕೊಹ್ಲಿ ತೋರಿಸಿಕೊಟ್ಟಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ
ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ