ತಿಹಾರ್ ಜೈಲಿನಲ್ಲಿದ್ದಾಗ ಆತ್ಮಹತ್ಯೆಯ ಯೋಚನೆ ಮಾಡಿದ್ದ ಶ್ರೀಶಾಂತ್ ಈಗ ತಮ್ಮ ವಿರುದ್ಧ ವಿಧಿಸಿರುವ ಜೀವಾವಧಿ ನಿಷೇಧ ತೆರವು ಮಾಡುವಂತೆ ಕೋರಲು ಬಿಸಿಸಿಸಿಯನ್ನು ಸಂಪರ್ಕಿಸುವ ಆಶಯ ಹೊಂದಿದ್ದಾರೆ. ಶ್ರೀಶಾಂತ್ ಅವರನ್ನು ಐಪಿಎಲ್ 2013ರ ಸ್ಪಾಟ್ ಫಿಕ್ಸಿಂಗ್ ಹಗರಣದಿಂದ ದೆಹಲಿ ಹೈಕೋರ್ಟ್ ದೋಷಮುಕ್ತಿಗೊಳಿಸಿತ್ತು.
ನಾನು ಬಿಸಿಸಿಐ ಕಾರ್ಯದರ್ಶಿ ಅನುರಾಗ್ ಠಾಕುರ್ ಭೇಟಿಗೆ ಕೋರಿದ್ದೇನೆ. ನಿಷೇಧ ತೆರವಿಗೆ ನಾನು ಅರ್ಜಿ ಸಲ್ಲಿಸಬಹುದೆಂದು ಠಾಕುರ್ ಟಿವಿ ಚಾನೆಲ್ವೊಂದಕ್ಕೆ ತಿಳಿಸಿದ್ದರು ಎಂದು ಶ್ರೀಶಾಂತ್ ಹೇಳಿದ್ದಾರೆ.
ಬಿಸಿಸಿಐನ ಉನ್ನತಾಧಿಕಾರಿಗಳು ನನ್ನ ಮನವಿ ಪರಿಶೀಲನೆ ಮಾಡುವುದಾಗಿ ಸೂಚನೆ ನೀಡಿರುವುದರಿಂದ ನನ್ನಲ್ಲಿ ಆಶಾವಾದ ಮೂಡಿದ್ದು, ಅರ್ಜಿ ಸಲ್ಲಿಸಲು ಬಯಸಿದ್ದೇನೆ. ಬಿಸಿಸಿಐನ ಮುಂದಿನ ಸಭೆಯಲ್ಲಿ ಅನುಕೂಲಕರ ನಿರ್ಧಾರ ತೆಗೆದುಕೊಳ್ಳುತ್ತಾರೆಂದು ಆಶಿಸುತ್ತೇನೆ ಎಂದು ಶ್ರೀಶಾಂತ್ ಹೇಳಿದರು.
ಕ್ರಿಕೆಟ್ ಬೆಟ್ಟಿಂಗ್ ಜಾಲದ ಜೊತೆ ನಂಟು ಹೊಂದಿರುವ ಆರೋಪದ ಮೇಲೆ ಬಂಧಿಸಿ ತಿಹಾರ್ ಜೈಲಿನಲ್ಲಿ ಇರಿಸಿದ ಬಳಿಕ ತಾವು ಅನುಭವಿಸಿದ ಯಾತನೆಯನ್ನು ಶ್ರೀಶಾಂತ್ ವಿವರಿಸಿದರು.
ಆರಂಭದಲ್ಲಿ ನಾನು ಆತ್ಮಹತ್ಯೆಯ ಬಗ್ಗೆ ಯೋಚಿಸಿದೆ. ಎಟ್ಟುಮನೂರಪ್ಪನ್ ದೇವರ ಮೇಲಿನ ನಿಷ್ಠೆಯಿಂದ ಮತ್ತು ಕುಟುಂಬ ನೀಡಿದ ಬೆಂಬಲದಿಂದ ನಾನು ದುಃಖವನ್ನು ತಡೆದುಕೊಂಡೆ ಎಂದು ಶ್ರೀಶಾಂತ್ ಹೇಳಿದ್ದಾರೆ.