ಐಪಿಎಲ್ ಆರಂಭವಾಗುವುದಕ್ಕೆ ಮೂರು ದಿನಗಳು ಮುಂಚಿತವಾಗಿಯೇ ಮುಂಬೈ ಹೈಕೋರ್ಟ್ ಮಹಾರಾಷ್ಟ್ರ ಕ್ರಿಕೆಟ್ ಸಂಸ್ಥೆ ಪಿಚ್ ಸಿದ್ದಪಡಿಸಲು ನೀರನ್ನು ಪೋಲು ಮಾಡುತ್ತಿರುವ ಬಗ್ಗೆ ತರಾಟೆಗೆ ತೆಗೆದುಕೊಂಡಿದೆ. ರಾಜ್ಯದ ಅನೇಕ ಭಾಗಗಳು ಬರದಿಂದ ನಲುಗಿದೆ.
ನೀವು ಇಷ್ಟೊಂದು ನೀರನ್ನು ಹೇಗೆ ಪೋಲು ಮಾಡುತ್ತೀರಿ. ನಿಮಗೆ ಜನರು ಮುಖ್ಯರಾಗಿದ್ದಾರೋ ಅಥವಾ ಐಪಿಎಲ್ ಮುಖ್ಯವಾಗಿದೆಯೇ, ನೀವು ಇಷ್ಟೊಂದು ನಿರ್ಲಕ್ಷ್ಯ ಹೇಗೆ ವಹಿಸುತ್ತೀರಿ ಎಂದು ಅರ್ಜಿಯೊಂದರ ವಿಚಾರಣೆ ನಡೆಸಿದ ಕೋರ್ಟ್ ಕ್ರಿಕೆಟ್ ಸಂಸ್ಥೆಯನ್ನು ಹಿಗ್ಗಾಮುಗ್ಗಾ ಝಾಡಿಸಿತು.
ತಾವು ಬಳಕೆಗಾಗಿ ನೀರನ್ನು ಖರೀದಿಸುತ್ತಿದ್ದು, ಈ ನೀರು ಕುಡಿಯಲು ಯೋಗ್ಯವಲ್ಲ ಎಂದು ಮಹಾರಾಷ್ಟ್ರ ಕ್ರಿಕೆಟ್ ಸಂಸ್ಥೆ ವಾದ ಮಂಡಿಸಿತ್ತು. ನೀವು ಹೇಳುವ ರೀತಿ ಸರಿಯಿಲ್ಲ. ಬಿಸಿಸಿಐಗೆ ನೀರಿನ ಪೂರೈಕೆ ಕಟ್ ಮಾಡಿದರೆ ನಿಮಗೆ ಅರ್ಥವಾಗುತ್ತದೆ ಎಂದು ಹೇಳಿದ ಹೈಕೋರ್ಟ್ ಮಹಾರಾಷ್ಟ್ರದಲ್ಲಿ ನಡೆಯುವ ಐಪಿಎಲ್ ಪಂದ್ಯಗಳನ್ನು ನೀರಿನ ಕೊರತೆ ಎದುರಿಸದಿರುವ ರಾಜ್ಯಗಳಿಗೆ ಸ್ಥಳಾಂತರಿಸುವಂತೆ ಸಲಹೆ ಮಾಡಿತು.
ನೀರನ್ನು ವ್ಯರ್ಥವಾಗಿ ಪೋಲು ಮಾಡುವುದರ ವಿರುದ್ಧ ಅದು ಆದೇಶ ನೀಡಬೇಕು ಮತ್ತು ತೆಗೆದುಕೊಂಡ ಯೋಜನೆಗಳ ಕುರಿತು ಮಾಹಿತಿ ನೀಡಬೇಕು. ಕ್ರಿಕೆಟ್ ಪಿಚ್ಗಳಿಗೆ ನೀರು ಹರಿಸುವುದರ ವಿರುದ್ಧ ಅರ್ಜಿಯನ್ನು ನಾವು ನಾಳೆ ಮುಂದುವರಿಸುತ್ತೇವೆ ಎಂದು ನುಡಿದರು. ಮುಂಬೈ, ಪುಣೆ ಮತ್ತು ನಾಗ್ಪುರದಲ್ಲಿ ನಡೆಯುವ ಪಂದ್ಯಗಳಿಗೆ ಅಂದಾಜು 60 ಲಕ್ಷ ಲೀಟರ್ ನೀರನ್ನು ಬಳಸಲಾಗುತ್ತಿದೆ ಎಂದು ಅರ್ಜಿದಾರರು ತಿಳಿಸಿದ್ದರು.