ಪಾಕಿಸ್ತಾನದಲ್ಲಿ ಬಸ್ ಮೇಲೆ ಮತ್ತೆ ಭಯೋತ್ಪಾದಕ ದಾಳಿ ನಡೆದಿರುವ ಹಿನ್ನೆಲೆಯಲ್ಲಿ ಜಿಂಬಾಬ್ವೆ ತಂಡದ ಪಾಕ್ ಪ್ರವಾಸ ಡೋಲಾಯಮಾನ ಸ್ಥಿತಿಯಲ್ಲಿರುವ ನಡುವೆ, ಪಿಸಿಬಿಯು ಬಾಂಗ್ಲಾದೇಶವನ್ನು ಭಯೋತ್ಪಾದನೆ ಪೀಡಿತ ಪಾಕ್ನಲ್ಲಿ ಆಡುವುದಕ್ಕೆ ಆಹ್ವಾನ ನೀಡಿದೆ.
ಇಸ್ಮೈಲಿ ಸಮುದಾಯಕ್ಕೆ ಸೇರಿದ ಬಸ್ ಮೇಲೆ ಭಯೋತ್ಪಾದಕರು ಗುಂಡಿನ ದಾಳಿ ನಡೆಸಿದ್ದರಿಂದ 18 ಮಹಿಳೆಯರು ಸೇರಿದಂತೆ 46 ಜನರು ಮೃತಪಟ್ಟಿದ್ದರು. ಪಾಕ್ನಲ್ಲಿ ಭಯೋತ್ಪಾದನೆ ಮತ್ತೆ ಜೀವತಳೆದಿರುವ ಹಿನ್ನಲೆಯಲ್ಲಿ ಜಿಂಬಾಬ್ವೆ ಕೂಡ ಪಾಕಿಸ್ತಾನಕ್ಕೆ ನಿಗದಿ ಮಾಡಿದ್ದ ಪ್ರವಾಸದ ಬಗ್ಗೆ ಪುನರ್ಪರಿಶೀಲನೆ ನಡೆಸುತ್ತಿದೆ. ಭಾರತ ಪ್ರವಾಸದ ಬಳಿಕ ಹಿಂತಿರುಗಿದ ಪಿಸಿಬಿ ಅಧ್ಯಕ್ಷ ಶಹರ್ಯಾರ್ ಖಾನ್ ಭವಿಷ್ಯದಲ್ಲಿ ಪಾಕಿಸ್ತಾನಕ್ಕೆ ಇನ್ನಷ್ಟು ತಂಡಗಳು ಬರುವ ಆಶಯವನ್ನು ವ್ಯಕ್ತಪಡಿಸಿದರು.
ನಾವು ಬಾಂಗ್ಲಾದೇಶ ಮಂಡಳಿಯನ್ನು ಅವರ ತಂಡವನ್ನು ಕಳಿಸುವಂತೆ ಆಹ್ವಾನ ನೀಡಿದ್ದು, ಅವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಢಾಕಾದಲ್ಲಿ ಅವರ ಅಧಿಕಾರಿಗಳ ಜೊತೆ ಸಕಾರಾತ್ಮಕ ಚರ್ಚೆಗಳನ್ನು ನಡೆಸಿರುವುದಾಗಿ ಶಹರ್ಯಾರ್ ತಿಳಿಸಿದರು.
ಢಾಕಾದಲ್ಲಿ ಕೆಲವು ದಿನ ಕಳೆದಿದ್ದ ಪಿಸಿಬಿ ಮುಖ್ಯಸ್ಥ ಭಾರತ ಪಾಕ್ ದ್ವಿಪಕ್ಷೀಯ ಕ್ರಿಕೆಟ್ ಸಂಬಂಧದ ಪುನಶ್ಚೇತನದ ಚರ್ಚೆಗೆ ಬಿಸಿಸಿಐ ಮತ್ತು ಸರ್ಕಾರಿ ಅಧಿಕಾರಿಗಳ ಜೊತೆ ಮಾತುಕತೆ ನಡೆಸಿದ್ದರು.