ಬಿಸಿಸಿಐ ಮಾಜಿ ಅಧ್ಯಕ್ಷ ಎನ್. ಶ್ರೀನಿವಾಸನ್ ಸುತ್ತ ಸದಾ ವಿವಾದಗಳ ಹುತ್ತ ಆವರಿಸಿದ್ದು, ಮಂಡಳಿಯ ಅಧ್ಯಕ್ಷರಾಗಿದ್ದಾಗ ಇತರೆ ಬಿಸಿಸಿಐ ಸದಸ್ಯರ ಮೇಲೆ ಬೇಹುಗಾರಿಕೆ ನಡೆಸಲು ಮಂಡಳಿಯ 14 ಕೋಟಿ ರೂ. ಹಣವನ್ನು ಲಂಡನ್ ಮೂಲಕ ಖಾಸಗಿ ಸಂಸ್ಥೆಗೆ ಕೊಟ್ಟಿದ್ದರೆಂಬ ಸಂಗತಿ ವರದಿಯಾಗಿದೆ. ಬಿಸಿಸಿಐ ಹೊಸ ಅಧ್ಯಕ್ಷ ಜಗ್ಮೋಹನ್ ದಾಲ್ಮಿಯಾ ನೇತೃತ್ವದಲ್ಲಿ ಮೊದಲ ಕಾರ್ಯಕಾರಿ ಸಮಿತಿ ಸಭೆಯನ್ನು ಭಾನುವಾರ ನಡೆಸಿತು. ಭಾರತದ ನೂತನ ಕೋಚ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ಕಡಿಮೆ ಮೌಲ್ಯೀಕರಣವನ್ನು ಕುರಿತು ಸಭೆಯಲ್ಲಿ ಚರ್ಚಿಸಿತು.
ಸಿಎಸ್ಕೆಯ ಆಸ್ತಿಯನ್ನು ಕಡಿಮೆ ಮೌಲ್ಯೀಕರಣ ಮಾಡಿದ ಘಟನೆ ಮತ್ತು ಬಿಸಿಸಿಐ ಸದಸ್ಯರ ಫೋನ್ ಕದ್ದಾಲಿಕೆ ಮತ್ತು ಖಾಸಗಿ ಈಮೇಲ್ಗಳ ಜಾಡು ಹಿಡಿದ ಕೃತ್ಯಕ್ಕಾಗಿ ಬಿಸಿಸಿಐ ಅಧಿಕಾರಿಗಳು ತಮ್ಮ ಅಸಮಾಧಾನ ಹೊರಹಾಕಿದರು ಎಂದು ತಿಳಿದುಬಂದಿದೆ.
ಬಿಸಿಸಿಐ ಅಧಿಕಾರಿಗಳ ಮೇಲೆ ಗೂಢಚರ್ಯೆ ನಡೆಸಿದ ಪ್ರಕರಣದ ಬಗ್ಗೆ ಬಿಸಿಸಿಐ ತನಿಖೆ ನಡೆಸುವ ನಿರೀಕ್ಷೆಯಿದ್ದು, ಕಾರ್ಯದರ್ಶಿ ಅನುರಾಗ್ ಠಾಕುರ್ ತನಿಖಾ ಸಮಿತಿಯ ನೇತೃತ್ವ ವಹಿಸಬಹುದೆಂದು ಹೇಳಲಾಗುತ್ತಿದೆ.
2009ರಿಂದ ಆರಂಭಿಸಲಾದ ಚಾಂಪಿಯನ್ಸ್ ಲೀಗ್ ಟಿ20 ಪಂದ್ಯಾವಳಿಯ ಭವಿಷ್ಯವನ್ನು ಕುರಿತು ಬಿಸಿಸಿಐ ಚರ್ಚೆ ನಡೆಸಿತು. ಈ ಪಂದ್ಯಾವಳಿಯು ಅಷ್ಟೊಂದು ಯಶಸ್ವಿಯಾಗದೇ ನಷ್ಟ ಉಂಟುಮಾಡಿತ್ತು.