ಮುಂಬರುವ ಏಷ್ಯಾ ಕಪ್ ಪಂದ್ಯಾವಳಿಗೆ ಮೊಹಮ್ಮದ್ ಶಮಿ ಅವರನ್ನು ಆಡಿಸುವುದಿಲ್ಲವಾದ್ದರಿಂದ, ಐಸಿಸಿ ವಿಶ್ವ ಟ್ವೆಂಟಿ 20 ಪಂದ್ಯಾವಳಿಯಲ್ಲಿ ಕೂಡ ಅವರ ಭಾಗವಹಿಸುವಿಕೆ ಅನುಮಾನಾಸ್ಪದವಾಗಿದೆ. ಆಯ್ಕೆ ಸಮಿತಿಯು ಅವರಿಗೆ ಬದಲಿಯಾಗಿ ಭುವನೇಶ್ವರ್ ಕುಮಾರ್ ಅವರನ್ನು ಹೆಸರಿಸಿದೆ. ಕಳೆದ ವರ್ಷ ವಿಶ್ವ ಕಪ್ ಬಳಿಕ ಸುದೀರ್ಘ ಕಾಲ ಗಾಯದಿಂದ ಬಳಲಿದ್ದ ಶಮಿಯನ್ನು ರಾಷ್ಟ್ರೀಯ ತಂಡಕ್ಕೆ ಪುನಃ ಕರೆಸಲಾಗಿತ್ತು. ಆದರೆ ಮಂಡಿರಜ್ಜು ಗಾಯದಿಂದ ಪುನಃ ಅವರ ಆಯ್ಕೆಯನ್ನು ತಳ್ಳಿಹಾಕಲಾಗಿದೆ.
ಮೊಹಮ್ಮದ್ ಶಮಿಯನ್ನು 2016ರ ಏಷ್ಯಾ ಕಪ್ನಲ್ಲಿ ಆಡಿಸದಿರುವುದು ದೃಢಪಟ್ಟಿದೆ. ಎಡ ಮಂಡಿರಜ್ಜು ಗಾಯದಿಂದ ಚೇತರಿಸಿಕೊಳ್ಳಲು ಹೆಚ್ಚು ಸಮಯ ನೀಡುವುದಕ್ಕಾಗಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಬಿಸಿಸಿಐ ಕಾರ್ಯದರ್ಶಿ ಅನುರಾಗ್ ಠಾಕುರ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಎರಡು ಪಂದ್ಯಾವಳಿಗಳಿಗೆ ಫೆ. 5ರಂದು ತಂಡವನ್ನು ಪ್ರಕಟಿಸುವ ಕಾಲದಲ್ಲಿ ಶಮಿ ತಮ್ಮ ಫಿಟ್ನೆಸ್ ಸಾಬೀತುಮಾಡುವಲ್ಲಿ ವಿಫಲರಾಗಿದ್ದರು. ಆದಾಗ್ಯೂ ಆಯ್ಕೆ ಸಮಿತಿಯ ಅಧ್ಯಕ್ಷ ಸಂದೀಪ್ ಪಾಟೀಲ್ ಶಮೀ ಬೌಲಿಂಗ್ ಆರಂಭಿಸಿದ್ದು, ದೊಡ್ಡ ಹಣಾಹಣಿ ವೇಳೆಗೆ ಫಿಟ್ ಆಗುತ್ತಾರೆಂಬ ಆಶಯ ವ್ಯಕ್ತಪಡಿಸಿದ್ದರು.