ಮೊಹಾಲಿ: ಪ್ರತೀ ಬಾರಿಯೂ ರವಿಚಂದ್ರನ್ ಅಶ್ವಿನ್ ಮೇಲೆಯೇ ಎಲ್ಲಾ ಹೊರೆ ಹಾಕುತ್ತಾರೆ ಎನ್ನುವ ಅಪವಾದ ಟೀಂ ಇಂಡಿಯಾದ ಇತರ ಬೌಲರ್ ಗಳ ಮೇಲಿತ್ತು. ಈ ಪಂದ್ಯದಲ್ಲಿ ಅದನ್ನು ಎಲ್ಲಾ ಬೌಲರ್ ಗಳು ಗಂಭೀರವಾಗಿ ಪರಿಗಣಿಸಿದಂತಿತ್ತು. ಹಾಗಾಗಿ ಟೀಂ ಇಂಡಿಯಾ ಬೌಲರ್ ಗಳ ಸಾಂಘಿಕ ಹೋರಾಟದ ಫಲವಾಗಿ ಮೂರನೇ ಟೆಸ್ಟ್ ನ ಮೊದಲ ದಿನದಂತ್ಯಕ್ಕೆ ಪ್ರವಾಸಿ ಇಂಗ್ಲೆಂಡ್ 8 ವಿಕೆಟ್ ನಷ್ಟಕ್ಕೆ 268 ರನ್ ಗಳಿಸಲು ಶಕ್ತವಾಗಿದೆಯಷ್ಟೆ.
ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಇಂಗ್ಲೆಂಡ್ ನಿರ್ಧಾರವೇನೋ ಸರಿಯಾಗಿಯೇ ಇತ್ತು. ಆರಂಭದಲ್ಲೇ ಪಿಚ್ ನೋಡಿದ್ದ ಸುನಿಲ್ ಗವಾಸ್ಕರ್ ಕೂಡಾ ಇದನ್ನೇ ಹೇಳಿದ್ದರು. ಆದರೆ ಎಡವಿದ್ದು ಬೌನ್ಸ್ ಆಗುತ್ತಿದ್ದ ಪಿಚ್ ನಿಂದಾಗಿ. ಹೀಗಾಗಿ ಇಂಗ್ಲೆಂಡ್ ಆರಂಭಿಕ ಆಘಾತ ಅನುಭವಿಸಿತು. ಭಾರತದ ಬೌಲರ್ ಗಳ ಪೈಕಿ ರವೀಂದ್ರ ಜಡೇಜಾ ಮತ್ತು ಉಮೇಶ್ ಯಾದವ್ ಎರಡು ವಿಕೆಟ್ ಕಿತ್ತರೆ ಉಳಿದೆಲ್ಲಾ ಬೌಲರ್ ಗಳು ತಲಾ ಒಂದು ವಿಕೆಟ್ ಕಿತ್ತರು.
ಸರಿಯಾದ ಯೋಜನೆ ಸಿದ್ಧಪಡಿಸಿ ಬೌಲ್ ಮಾಡಿದರೆ ಬ್ಯಾಟ್ಸ್ ಮನ್ ಗಳನ್ನು ಕಟ್ಟಿ ಹಾಕಲು ಸಾಧ್ಯ ಎಂದು ಕೋಚ್ ಅನಿಲ್ ಕುಂಬ್ಳೆ, ಸಂಜಯ್ ಬಂಗಾರ್ ಹೇಳಿದ್ದರು ಎಂದು ಉಮೇಶ್ ಯಾದವ್ ಹೇಳಿಕೊಂಡಿದ್ದಾರೆ. ಪರಿಣಾಮ ಮೊದಲ ದಿನ ಭಾರತದ್ದಾಗಿತ್ತು. ಆದರೂ ಇಂಗ್ಲೆಂಡ್ ವಿಕೆಟ್ ಕೀಪರ್ ಜೆ.ಬೇರ್ ಸ್ಟೋ ಅವರ 89 ರನ್ ಗಳ ಇನಿಂಗ್ಸ್ ಮರೆಯುವಂತಿಲ್ಲ.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ