ಭಾರತದ ಮಾರಕ ವೇಗಿ ಇಶಾಂತ್ ಶರ್ಮಾ ಅವರನ್ನು ಮಂಗಳವಾರ ಒಂದು ಟೆಸ್ಟ್ ಪಂದ್ಯದಿಂದ ಅಮಾನತುಗೊಳಿಸಲಾಗಿದೆ. ಶ್ರೀಲಂಕಾ ವಿರುದ್ಧ 3ನೇ ಟೆಸ್ಟ್ ಪಂದ್ಯದಲ್ಲಿ ಐಸಿಸಿ ನೀತಿ ಸಂಹಿತೆಯನ್ನು ಉಲ್ಲಂಘಿಸಿದ ಆರೋಪದ ಮೇಲೆ ಈ ಅಮಾನತು ಆದೇಶ ನೀಡಲಾಗಿದೆ. ಎದುರಾಳಿ ಆಟಗಾರರೊಂದಿಗೆ ಪದೇ ಪದೇ ಮಾತಿನ ಚಕಮಕಿಯಲ್ಲಿ ತೊಡಗಿದ ಆರೋಪದ ಮೇಲೆ ಅವರಿಗೆ ಅಮಾನತು ಶಿಕ್ಷೆಯನ್ನು ವಿಧಿಸಲಾಗಿದೆ.
ಇಶಾಂತ್ ಅವರು ಮೊಹಾಲಿಯಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ನವೆಂಬರ್ 5ರಿಂದ ಆರಂಭವಾಗುವ ಮೊದಲ ಟೆಸ್ಟ್ ಪಂದ್ಯ ಮಿಸ್ ಮಾಡಿಕೊಳ್ಳಲಿದ್ದಾರೆ. ಶ್ರೀಲಂಕಾದ ದಿನೇಶ್ ಚಾಂಡಿಮಾಲ್ ಅವರಿಗೆ ಒಂದು ಏಕದಿನ ಪಂದ್ಯದಿಂದ ಅಮಾನತುಗೊಳಿಸಿದ ಶಿಕ್ಷೆ ನೀಡಲಾಗಿದೆ. ಚಾಂಡಿಮಾಲ್ ಅವರು ಉದ್ದೇಶಪೂರ್ವಕವಾಗಿ ಇಶಾಂತ್ ಮೈಯನ್ನು ಮುಟ್ಟಿದ್ದಕ್ಕಾಗಿ ಈ ಶಿಕ್ಷೆಗೆ ಗುರಿಪಡಿಸಲಾಗಿದೆ. ತಿರಿಮನೆ ಮತ್ತು ದಾಮ್ಮಿಕಾ ಪ್ರಸಾದ್ ಅವರಿಗೆ ಪಂದ್ಯ ಶುಲ್ಕದ ಶೇ. 50ರಷ್ಟು ದಂಡವನ್ನು ವಿಧಿಸಲಾಗಿದೆ.
ಓಪನರ್ ಉಪುಲ್ ತರಂಗಾಗೆ ಸೆಂಡ್ ಆಫ್ ಸಂಜ್ಞೆ ಮಾಡಿದ ಕಾರಣಕ್ಕಾಗಿ ಎರಡು ಅಮಾನತು ಪಾಯಿಂಟ್ಗಳನ್ನು ಇಶಾಂತ್ ಶರ್ಮಾಗೆ ವಿಧಿಸಲಾಗಿತ್ತು. ಪ್ರತ್ಯೇಕ ಘಟನೆಯಲ್ಲಿ ಶ್ರೀಲಂಕಾದ ಎರಡನೇ ಇನ್ನಿಂಗ್ಸ್ನಲ್ಲಿ ತರಂಗಾ ಔಟಾದ ಕೂಡಲೇ ಇಶಾಂತ್ ಸೆಂಡ್ ಆಫ್ ಸಂಜ್ಞೆ ಮಾಡಿದ್ದರು. ಅಂತಾರಾಷ್ಟ್ರೀಯ ಪಂದ್ಯದಲ್ಲಿ ಆಟಗಾರ ಔಟಾದ ಕೂಡಲೇ ಫೀಲ್ಡರ್ಗಳು ಅಥವಾ ಬೌಲರ್ ಕೆಟ್ಟ ಭಾಷೆ, ಸಂಜ್ಞೆಗಳು ಬಳಸಿದರೆ ಆಟಗಾರನಿಂದ ಆಕ್ರೋಶದ ಪ್ರತಿಕ್ರಿಯೆ ಬರುವ ಸಾಧ್ಯತೆಯಿರುವುದರಿಂದ ಶರ್ಮಾಗೆ ಈ ಶಿಕ್ಷೆ ವಿಧಿಸಲಾಗಿದೆ.