ಈ ವರ್ಷದ ಇಂಡಿಯನ್ ಪ್ರೀಮಿಯರ್ ಲೀಗ್ಗೆ ಮುಂಚಿತವಾಗಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಗಾಯಾಳುಗಳ ಸಮಸ್ಯೆ ಬಾಧಿಸಿದೆ. ಆ ತಂಡವು ವೇಗಿ ಮಿಚೆಲ್ ಸ್ಟಾರ್ಕ್ ಅವರನ್ನು ಈಗಾಗಲೇ ಕಳೆದುಕೊಂಡಿದ್ದರೆ, ವಿಶ್ವ ಟಿ 20 ಫೈನಲ್ನಲ್ಲಿ ಇಂಗ್ಲೆಂಡ್ ವಿರುದ್ಧ ಗಾಯಗೊಂಡಿದ್ದ ಸ್ಯಾಮ್ಯುಯಲ್ ಬದ್ರಿ ಕೂಡ ಆಡಲಾಗುತ್ತಿಲ್ಲ. ಸ್ಟಾರ್ಕ್ ಅವರು ಅಡೆಲೈಡ್ನಲ್ಲಿ ನ್ಯೂಜಿಲೆಂಡ್ ವಿರುದ್ಧ ಹಗಲು ರಾತ್ರಿ ಟೆಸ್ಟ್ ಪಂದ್ಯದಲ್ಲಿ ಗಾಯಗೊಂಡು ಹಿಮ್ಮಡಿ ಶಸ್ತ್ರಚಿಕಿತ್ಸೆಗೆ ಒಳಗಾಗಿ ಚೇತರಿಸಿಕೊಳ್ಳುತ್ತಿದ್ದಾರೆ.
ಅವರ ಅನುಪಸ್ಥಿತಿಯು ಆರ್ಸಿಬಿಗೆ ಭಾರೀ ಹಿನ್ನಡೆಯಾಗಿದ್ದು, ಕಳೆದ ಆವೃತ್ತಿಯಲ್ಲಿ ತಂಡದ ಅತೀ ಮಿತವ್ಯಯಿ ಬೌಲರ್ ಎನಿಸಿಕೊಂಡು 12 ಇನ್ನಿಂಗ್ಸ್ಗಳಲ್ಲಿ 20 ವಿಕೆಟ್ ಕಬಳಿಸಿದ್ದರು.
ಸ್ಟಾರ್ಕ್ ಅವರನ್ನು ದಕ್ಷಿಣ ಆಫ್ರಿಕಾ ಮತ್ತು ಆತಿಥೇಯ ವೆಸ್ಟ್ ಇಂಡೀಸ್ ವಿರುದ್ದು ಜೂನ್ 3ರಂದು ನಡೆಯುವ ತ್ರಿಕೋನ ಸರಣಿಗೆ 16 ಆಟಗಾರರ ಪಟ್ಟಿಯಲ್ಲಿ ಹೆಸರಿಸಲಾಗಿದ್ದು, ನಿರ್ಣಾಯಕ ಪ್ರವಾಸಕ್ಕೆ ಉತ್ತಮ ಸದೃಢತೆ ಕಾಯ್ದುಕೊಳ್ಳಲು ಐಪಿಎಲ್ಗೆ ಆಡದಿರುವ ಸಾಧ್ಯತೆ ಹೆಚ್ಚಾಗಿದೆ.
ಆರ್ಸಿಬಿ ಚಿಂತಕರ ಚಾವಡಿಯು ಸ್ಟಾರ್ಕ್ಗೆ ಬದಲಿ ಆಟಗಾರನನ್ನು ಇನ್ನೂ ನಿರ್ಧರಿಸಿಲ್ಲ. ಭಾರತದ ಸ್ಟುವರ್ಟ್ ಬಿನ್ನಿ, ವರುಣ್ ಆರಾನ್ ಮತ್ತು ಶ್ರೀನಾಥ್ ಅರವಿಂದ್ ಜತೆಗೆ ತಂಡದಲ್ಲಿ ನ್ಯೂಜಿಲೆಂಡ್ ಅಡಾಮ್ ಮಿಲ್ನೆ, ಆಸೀಸ್ ದ್ವಯರಾದ ಶೇನ್ ವಾಟ್ಸನ್ ಮತ್ತು ಕೇನ್ ರಿಚರ್ಡ್ಸನ್ ಮತ್ತು ದಕ್ಷಿಣ ಆಫ್ರಿಕಾದ ಡೇವಿಡ್ ವೈಸ್ ಇದ್ದಾರೆ.
ಏಪ್ರಿಲ್ 12ರಂದು ಸನ್ರೈಸರ್ಸ್ ವಿರುದ್ಧ ಪಂದ್ಯಕ್ಕೆ ಒಂದು ವಾರ ಬಾಕಿವುಳಿದಿದ್ದು, ವಿರಾಟ್ ಕೊಹ್ಲಿ ನಾಯಕತ್ವದ ತಂಡಕ್ಕೆ ಬದ್ರಿ ಕುರಿತು ಅನಿಶ್ಚಿತತೆ ಇನ್ನೊಂದು ಚಿಂತೆಗೆ ಕಾರಣವಾಗಿದೆ.
ಸ್ಟಾರ್ ಆಟಗಾರರರಾದ ಶೇನ್ ವಾಟ್ಸನ್ ಮತ್ತು ಗೇಲ್ ಅವರು ಬೆಂಗಳೂರಿಗೆ ಬುಧವಾರ ಮುಟ್ಟಲಿದ್ದಾರೆ. ಕೊಹ್ಲಿ ಗುರುವಾರ ತಂಡವನ್ನು ಸೇರಲಿದ್ದು, ಅವರ ಹಿಂದೆ ಡಿ ವಿಲಿಯರ್ಸ್ ಮತ್ತು ಮಿಲ್ನೆ ಸೇರಲಿದ್ದಾರೆ.