ರಾಜಕೀಯ ಮತ್ತು ಕ್ರಿಕೆಟ್ ಒಟ್ಟಿಗೆ ಬೆರೆಸಬಾರದು ಎಂದು ವಾಸಿಂ ಅಕ್ರಂ ಹೇಳಿಕೆಗೆ ಭಿನ್ನವಾಗಿ ಭಾರತ ಮತ್ತು ಪಾಕಿಸ್ತಾನದ ನಡುವೆ ಭಯೋತ್ಪಾದನೆ ಚಟುವಟಿಕೆಯಿಂದ ಉದ್ವಿಗ್ನತೆ ಮೂಡಿರಬೇಕಾದರೆ ದ್ವಿಪಕ್ಷೀಯ ಸರಣಿ ಅಸಾಧ್ಯ ಎಂದು ಶೋಯಬ್ ಅಕ್ತರ್ ಹೇಳಿದರು.
ಐಸಿಸಿ ಫ್ಯೂಚರ್ ಟೂರ್ಸ್ ಪ್ರೋಗ್ರಾಂಗೆ ಅನುಗುಣವಾಗಿ, ಭಾರತ 2015ರ ಅಂತ್ಯದಲ್ಲಿ ಪಾಕಿಸ್ತಾನದ ವಿರುದ್ಧ ಭಾರತ ಆಡಲು ನಿಗದಿಯಾಗಿತ್ತು. ಆದರೆ ಇತ್ತೀಚಿನ ದಿನಗಳಲ್ಲಿ ಗಡಿಯಾಚೆ ಭಯೋತ್ಪಾದನೆಯಿಂದ ಇಂತಹ ಸರಣಿ ಅಸಾಧ್ಯವೆನಿಸಿದೆ ಎಂದು ಅಕ್ತರ್ ಅಭಿಪ್ರಾಯಪಟ್ಟರು. ಉದ್ವಿಗ್ನ ರಾಜಕೀಯ ಪರಿಸ್ಥಿತಿ ಹಿನ್ನೆಲೆಯಲ್ಲಿ ಭಾರತ ಮತ್ತು ಪಾಕಿಸ್ತಾನ ಸರಣಿಯನ್ನು ಬಿಸಿಸಿಐ ಕಾರ್ಯದರ್ಶಿ ಅನುರಾಗ್ ಠಾಕೂರ್ ಖಡಾಖಂಡಿತವಾಗಿ ತಳ್ಳಿಹಾಕಿದ್ದು ಅಕ್ತರ್ಗೆ ಕೂಡ ಈ ನಡೆ ಆಶ್ಚರ್ಯಗೊಳಿಸಿಲ್ಲ.
ರಾಜಕೀಯವನ್ನು ಕ್ರೀಡೆಯಿಂದ ಪ್ರತ್ಯೇಕವಾಗಿರಿಸಿ ಎಂದು ಎಲ್ಲರೂ ಹೇಳುತ್ತಾರೆ. ಆದರೆ ದುರದೃಷ್ಟವಶಾತ್ ಗಡಿಯಲ್ಲಿ ತುಂಬಾ ಅಶಾಂತಿ ತುಂಬಿರಬೇಕಾದರೆ ಈ ಹಂತದಲ್ಲಿ ಆಡುವುದು ಸರಿಯಲ್ಲ ಎಂದು ಅಕ್ತರ್ ಅಭಿಪ್ರಾಯಪಟ್ಟರು.
40 ವರ್ಷದ ಅಕ್ತರ್ ಅವರು ಆಗಾಗ್ಗೆ ಭಾರತದ ಟಿವಿಗಳಲ್ಲಿ ಕಾಣಿಸಿಕೊಳ್ಳುತ್ತಿದ್ದು, ಉದ್ವಿಗ್ನ ಪರಿಸ್ಥಿತಿಯಲ್ಲಿ ಕ್ರಿಕೆಟ್ ಪ್ರವರ್ಧಿಸುವುದಿಲ್ಲ ಎಂದು ನುಡಿದರು. ಸರ್ಕಾರಗಳು ಒಪ್ಪಿಗೆ ಸೂಚಿಸಿದರೆ ಕೂಡ ಭಾರತ ಮತ್ತು ಪಾಕಿಸ್ತಾನದ ನಡುವೆ ದ್ವಿಪಕ್ಷೀಯ ಸರಣಿ ನಡೆಯಲು ಸಾಧ್ಯ ಎಂದು ಐಸಿಸಿ ಅಧ್ಯಕ್ಷ ಜಹೀರ್ ಅಬ್ಬಾಸ್ ಹೇಳಿದ್ದರು. ಆದ್ದರಿಂದ ಅಕ್ತರ್ ಹೇಳಿಕೆ ವಾಸ್ತವತೆಗಿಂತ ದೂರವಿಲ್ಲ ಎಂದು ಭಾವಿಸಲಾಗಿದೆ.