ಈ ಭಾರಿ ಭಾರತಕ್ಕೆ ವಿಶ್ವ ಟ್ವೆಂಟಿ 20 ಗೆಲ್ಲುವ ಉತ್ತಮ ಅವಕಾಶವಿದೆ ಎಂದು ಮಾಜಿ ಖ್ಯಾತ ಬ್ಯಾಟ್ಸ್ಮನ್ ಸಚಿನ್ ತೆಂಡೂಲ್ಕರ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ನಮಗೆ ಉತ್ತಮ ಅವಕಾಶವಿದೆ. ಟ್ವೆಂಟಿ20ಯಲ್ಲಿ ತಂಡ ಸಮತೋಲನದಿಂದ ಕೂಡಿದ್ದು, ತಂಡದಲ್ಲಿ ಹಿರಿಯ ಆಟಗಾರರ ಜತೆ ಯುವಕರ ಪ್ಯಾಕೇಜ್ನಿಂದ ಉತ್ತಮ ಸಾಧನೆ ತೋರಿದ್ದಾರೆ ಎಂದು ಮಾಸ್ಟರ್ ಬ್ಲಾಸ್ಟರ್ ತಿಳಿಸಿದರು.
ತಂಡದ ಕಾಂಬಿನೇಷನ್ ಕುರಿತು ಮಾತನಾಡಿದ ಸಚಿನ್ ಆಸ್ಟ್ರೇಲಿಯಾದಲ್ಲಿ ಬಮ್ರಾ ಬೌಲ್ ಮಾಡಿದ ರೀತಿ ಸೊಗಸಾಗಿತ್ತು. ಆಶಿಶ್ ನೆಹ್ಲಾ ಪುನಃ ಹಿಂತಿರುಗಿದ್ದು ಒಳ್ಳೆಯದು. ಯುವಿ ತಂಡಕ್ಕೆ ವಾಪಸಾಗಿರುವುದು, ಹರ್ಭಜನ್ ತಂಡದಲ್ಲಿರುವುದು ಒಳ್ಳೆಯ ಬೆಳವಣಿಗೆ .ಇದೊಂದು ಸದೃಢ ಕಾಂಬಿನೇಷನ್ ಆಗಿದೆ ಎಂದು ಸಚಿನ್ ಪ್ರತಿಕ್ರಿಯಿಸಿದರು.
ನಾವು ಟಿ20 ಆಡಿದ ರೀತಿ ಅದ್ಭುತವಾಗಿದೆ. ವಾಸ್ತವವಾಗಿ ನಾನು ಕಡೆಯ ಚೆಂಡನ್ನು ಆಡಿದ್ದನ್ನು ನೋಡಿದೆ. ನಾನು ಎಲ್ಲಿಗೋ ಹೋಗಿ ಆಗ ತಾನೆ ಹಿಂತಿರುಗಿದ್ದೆ. ತನ್ನ ಪತ್ನಿ ಮತ್ತು ಪುತ್ರ ಟಿವಿ ವೀಕ್ಷಿಸುತ್ತಿದ್ದರು. ಕೊನೆಯ ಎಸೆತದಲ್ಲಿ ಎರಡು ರನ್ ಬೇಕಾಗಿದ್ದು, ರೈನಾ ಪಾಯಿಂಟ್ನಲ್ಲಿ ಸೊಗಸಾದ ಶಾಟ್ ಹೊಡೆದು ಗೆಲುವಿನ ಗುರಿ ಮುಟ್ಟಿದರು ಎಂದು ಸಚಿನ್ ಹೇಳಿದರು.