ಜಿಮ್ನಾಸ್ಟಿಕ್ಸ್ ಮತ್ತು ಮಿಶ್ರಿತ ಸಮರಕಲೆ ಭಾರತದ ಬ್ಯಾಟ್ಸ್ಮನ್ಗಳಿಗೆ ಸಹಜವಾಗಿ ಬರುವುದಿಲ್ಲ. ಆದರೆ ಮಾಜಿ ಓಪನರ್ ಗೌತಮ್ ಗಂಭೀರ್ ತಮ್ಮ ಅಂತಾರಾಷ್ಟ್ರೀಯ ವೃತ್ತಿಜೀವನಕ್ಕೆ ಪುನಶ್ಚೇತನ ನೀಡಲು ಪರ್ತ್ನಲ್ಲಿ ಬೆವರುಹರಿಸಿದ್ದಾರೆ.
ಸುನಿಲ್ ಗವಾಸ್ಕರ್ ಬಳಿಕ ಅತ್ಯುತ್ತಮ ಭಾರತೀಯ ಓಪನರ್ ಎಂದು ಮಾಜಿ ಬ್ಯಾಟಿಂಗ್ ಜತೆಗಾರ ವೀರೇಂದ್ರ ಸೆಹ್ವಾಗ್ ಅವರ ಪ್ರಶಂಸೆಗೆ ಪಾತ್ರರಾಗಿದ್ದ ಗೌತಮ್ ಫಾರಂ ಕಳೆದುಕೊಂಡ ಬಳಿಕ ಆಯ್ಕೆದಾರರ ಅವಕೃಪೆಗೆ ಗುರಿಯಾಗಿ 20 ತಿಂಗಳು ಅಜ್ಞಾತವಾಸದಲ್ಲಿ ಕಳೆದರು. ಕಳೆದ ವರ್ಷ ಇಂಗ್ಲೆಂಡ್ನಲ್ಲಿ ಸಂಕ್ಷಿಪ್ತ ಕಮ್ಬ್ಯಾಕ್ ಆಗಿದ್ದರೂ ನಾಲ್ಕು ಇನ್ನಿಂಗ್ಸ್ನಲ್ಲಿ ಅತ್ಯಧಿಕ ಸ್ಕೋರಾದ 18 ರನ್ ಗಳಿಸಿದ್ದು ಗಂಭೀರ್ ಅವರನ್ನು ಮತ್ತೆ ಅಜ್ಞಾತವಾಸಕ್ಕೆ ದೂಡಿತು.
ಅನೇಕ ಮಂದಿ 2009ರ ಐಸಿಸಿ ವರ್ಷದ ಟೆಸ್ಟ್ ಆಟಗಾರ ಗೌತಮ್ ತಾಂತ್ರಿಕ ದೋಷಗಳೇ ವೈಫಲ್ಯಕ್ಕೆ ಕಾರಣವೆಂದು ಟೀಕಿಸಿದರು. ವಿಶೇಷವಾಗಿ ಗೌತಮ್ ಔಟ್ ಸೈಡ್ ಆಫ್ಸ್ಟಂಪ್ ಎಸೆತಗಳನ್ನು ಹೊಡೆಯಲು ಯತ್ನಿಸಿ ಔಟಾಗುತ್ತಿದ್ದ ಬಗ್ಗೆ ಟೀಕೆಗೆ ಗುರಿಯಾದರು.
ಅನೇಕ ಮಂದಿ ಎಡಗೈ ಆಟಗಾರರು ಔಟಾಗುವ ವಿಧಾನ ಇದಾಗಿದ್ದು, ಬಲಗೈ ಆಟಗಾರರು ಎಡಗೈ ವೇಗಿಗಳ ಬೌಲಿಂಗ್ನಲ್ಲಿ ಇದೇ ಸ್ಥಿತಿ ಅನುಭವಿಸುತ್ತಾರೆ ಎಂದು ಹೇಳಿದ ಗಂಭೀರ್, ಆಸ್ಟ್ರೇಲಿಯಾದ ಮಾಜಿ ಓಪನರ್ ಜಸ್ಟಿನ್ ಲ್ಯಾಂಗರ್ ಅವರ ಹದ್ದಿನ ಕಣ್ಣಿನಲ್ಲಿ ತರಬೇತಿ ಪಡೆಯುತ್ತಿದ್ದಾರೆ.
ನನ್ನ ವೇಳಾಪಟ್ಟಿಯು ನೆಟ್ನಲ್ಲಿ ಸಾಕಷ್ಟು ಬ್ಯಾಟಿಂಗ್ ಮಾಡುವುದು ಮತ್ತು ಪಶ್ಚಿಮ ಆಸ್ಟ್ರೇಲಿಯಾ ಬೌಲರುಗಳನ್ನು ಎದುರಿಸುವುದು. ನಾನು ಸ್ವಲ್ಪ ಮಿಶ್ರಿತ ಸಮರಕಲೆ ಮತ್ತು ಜಿಮ್ನಾಸ್ಟಿಕ್ಸ್ ಕೂಡ ಮಾಡುತ್ತಿರುವುದಾಗಿ ಗಂಭೀರ್ ಹೇಳಿದರು.