ಬಿಗಿಯಾದ ತಂತ್ರದಿಂದ ಮತ್ತು ನಿರಾತಂಕ ಮನೋಭಾವದೊಂದಿಗೆ ಚೇತೇಶ್ವರ್ ಪೂಜಾರ್ ಕ್ರೀಸ್ನಲ್ಲಿ ಭರವಸೆಯ ಉಪಸ್ಥಿತಿ ಮೂಡಿಸಿದ್ದಾರೆ ಎಂದು ಮಾಜಿ ನಾಯಕ ಸುನಿಲ್ ಗವಾಸ್ಕರ್ ಯುವ ಆಟಗಾರನನ್ನು ಶ್ಲಾಘಿಸುತ್ತಾ ಹೇಳಿದ್ದಾರೆ. ಸುದೀರ್ಘ ಕಾಲದ ಬಳಿಕ ಟೆಸ್ಟ್ ತಂಡಕ್ಕೆ ಕಮ್ ಬ್ಯಾಕ್ ಆಗಿರುವ ಪೂಜಾರಾ ಅಜೇಯ 135 ರನ್ ಬಾರಿಸಿ ಶ್ರೀಲಂಕಾ ವಿರುದ್ಧ ಎರಡನೇ ಟೆಸ್ಟ್ನಲ್ಲಿ ಆಘಾತದಿಂದ ಭಾರತವನ್ನು ಪಾರು ಮಾಡಿದ್ದರು.
ಅವರು ಬಿಗಿಯಾದ ತಂತ್ರ ಮತ್ತು ನಿರಾತಂಕ ಮನಸ್ಸಿನೊಂದಿಗೆ ಕಠಿಣ ಸನ್ನಿವೇಶದಿಂದ ಹೊರಬರುತ್ತಾರೆ. ಆಫ್ ಸ್ಟಂಪ್ ಆಚೆ ಚೆಂಡು ಆಡಲಾಗದಿದ್ದಾಗ ಅವರು ಬೇಸರಗೊಳ್ಳುವುದಿಲ್ಲ. ಓಕೆ, ಇದು ನಿಮ್ಮ ಕಾಲ, ನನ್ನ ಕಾಲವೂ ಕೆಲವು ಸಮಯದ ನಂತರ ಬರುತ್ತದೆ ಎಂಬ ಮನೋಧರ್ಮ ಹೊಂದಿದ್ದಾರೆಂದು ಗವಾಸ್ಕರ್ ಹೇಳಿದರು.
ಪೂಜಾರಾ ಓಪನಿಂಗ್ ಇನ್ನಿಂಗ್ಸ್ನಲ್ಲಿ ಉತ್ತಮವಾಗಿ ಆಡಿರುವುದರಿಂದ , ಓಪನರ್ ಕ್ರಮಾಂಕಕ್ಕೆ ಭಾರತಕ್ಕೆ ಅನೇಕ ಆಯ್ಕೆಗಳು ಸಿಕ್ಕಿದಂತಾಗಿದೆ. ಧವನ್ ಮತ್ತು ಮುರಳಿ ವಿಜಯ್ ಗಾಯದಿಂದ ನಿರ್ಗಮಿಸಿದ್ದು, ಎರಡನೇ ಟೆಸ್ಟ್ನಲ್ಲಿ ಶತಕವನ್ನು ದಾಖಲಿಸಿದ್ದಾರೆ.
ವಿಜಯ್ ಮತ್ತು ಧವನ್ ಪುನಃ ತಮ್ಮ ಸ್ಥಾನಕ್ಕೆ ಮರಳಿದರೆ ಆಯ್ಕೆದಾರರಿಗೆ ಯಾರನ್ನು ಓಪನಿಂಗ್ ಕಳಿಸಬೇಕೆಂಬ ತಲೆನೋವು ಆರಂಭವಾಗಬಹುದು. ಆದರೆ ಆರಂಭಿಕ ಆಟಗಾರರಾಗಿ ಯಾರೂ ಇಲ್ಲದೇ ಇರುವುದಕ್ಕಿಂತ ವಿಪುಲ ಆರಂಭಿಕ ಆಟಗಾರರ ಸಮಸ್ಯೆ ಇರುವುದು ಒಳ್ಳೆಯದು ಎಂದು ಮಾಜಿ ಓಪನರ್ ತಿಳಿಸಿದರು.