ಬ್ರಿಟಿಷ್ ತಮಿಳು ಮೂಲದ ಬ್ಯಾಟ್ಸ್ಮನ್ ಭವಾಲನ್ ಪದ್ಮನಾಥನ್ ಎದೆಗೆ ಚೆಂಡು ಬಡಿದು ದಾರುಣವಾಗಿ ಮೃತಪಟ್ಟ ಘಟನೆ ಸರ್ರೆಯಲ್ಲಿ ಸಂಭವಿಸಿದೆ. ಭಾನುವಾರ ಲಾಂಗ್ ಡಿಟ್ಟನ್ ಮೈದಾನದಲ್ಲಿ ಬ್ರಿಟಿಷ್ ತಮಿಳು ಲೀಗ್ ಪಂದ್ಯದಲ್ಲಿ ಮನಿಪೇ ಪ್ಯಾರಿಷ್ ಸ್ಫೋರ್ಟ್ಸ್ ಕ್ಲಬ್ ಪರ ಆಡುತ್ತಿದ್ದಾಗ ಚೆಂಡು ನೇರವಾಗಿ ಎದೆಗೆ ಬಡಿಯಿತು.
ಪದ್ಮನಾಥನ್ ಅವರಿಗೆ ಸಿಪಿಆರ್ ನೀಡಲಾಯಿತು ಮತ್ತು ಆಂಬ್ಯುಲೆನ್ಸ್ ವೈದ್ಯರು ಚಿಕಿತ್ಸೆ ನೀಡಿದರೂ ಫಲಕಾರಿಯಾಗದೇ 24 ವರ್ಷದ ಆಟಗಾರ ಹೃದಯಾಘಾತದಿಂದ ಅಸುನೀಗಿದ್ದಾರೆ.
ಪದ್ಮನಾಥನ್ ಅವರ ಜೊತೆ ಬ್ಯಾಟಿಂಗ್ ಮಾಡುತ್ತಿದ್ದ ಸಹಆಟಗಾರ ಪದ್ಮನಾಥನ್ ಎದೆಗೆ ಚೆಂಡು ತಾಗಿದ ಕೂಡಲೇ ಏನಾದರೂ ಸಮಸ್ಯೆಯಾಗಿದೆಯೇ ಎಂದು ಕೇಳಿದರು. ಅದಕ್ಕೆ ಪದ್ಮನಾಥನ್ ಏನೂ ಸಮಸ್ಯೆಯಿಲ್ಲ, ಚೆನ್ನಾಗಿದ್ದೇನೆ, ಐ ಆಮ್ ಆಲ್ರೈಟ್ ಎಂದು ಎದೆಯನ್ನು ಹಿಡಿದುಕೊಂಡು ಸಂಜ್ಞೆ ಮಾಡಿದ್ದರು. ಬಳಿಕ ವಿಕೆಟ್ ಹಿಂದೆ ಕೆಲವು ಹೆಜ್ಜೆ ಹಿಂದೆ ತೆರಳಿ ಕುಸಿದುಬಿದ್ದರು ಎಂದಿದ್ದಾರೆ.
ಸರ್ರೆ ಚೀಫ್ ಎಕ್ಸಿಕ್ಯೂಟಿವ್ ರಿಚರ್ಡ್ ಗೋಲ್ಡ್ ಭವಾಲನ್ ಸಾವಿಗೆ ಸಂತಾಪ ಸೂಚಿಸಿ, ಅವರ ಕುಟುಂಬಕ್ಕೆ,ಸ್ನೇಹಿತರಿಗೆ ಮತ್ತು ಉಳಿದೆಲ್ಲರಿಗೂ ತಮ್ಮ ಸಹಾನೂಭೂತಿಯನ್ನು ಸೂಚಿಸಿದರು.
ಆಸ್ಟ್ರೇಲಿಯಾದ ಮಾಜಿ ಆಟಗಾರ ಫಿಲಿಪ್ ಹ್ಯೂಸ್ ಅವರ ಕುತ್ತಿಗೆಗೆ ಬೌನ್ಸರ್ ಬಡಿದು ಸಾವನ್ನಪ್ಪಿದ ಬಳಿಕ ಮೈದಾನದಲ್ಲಿ ಬ್ಯಾಟ್ಸ್ಮನ್ ಸುರಕ್ಷತೆಯು ಇತ್ತೀಚಿನ ತಿಂಗಳಿನಲ್ಲಿ ಚರ್ಚೆಯ ವಿಷಯವಾಗಿತ್ತು.