ಟೀಂ ಇಂಡಿಯಾ ಸರಣಿ ಸೋಲುಗಳನ್ನು ಅನುಭವಿಸುತ್ತಿದ್ದರೂ ಕ್ರಿಕೆಟ್ ಕಣ್ಮಣಿ ಸಚಿನ್ ತೆಂಡೂಲ್ಕರ್ ಭಾರತ ಕ್ರಿಕೆಟ್ ಸರಿಯಾದ ದಿಕ್ಕಿನಲ್ಲಿ ಚಲಿಸುತ್ತಿದ್ದು, ಸುಧಾರಣೆಗೆ ಇನ್ನೂ ಅವಕಾಶವಿದೆ ಎಂದು ಪ್ರತಿಕ್ರಿಯಿಸಿದ್ದಾರೆ.
ಪ್ರಬಲ ಅಪೇಕ್ಷೆ ಇರುವ ತನಕ ಯುವ ಟಿಂ ಇಂಡಿಯಾ ಹಳಿಯ ಮೇಲೆ ಇರುತ್ತದೆ ಎಂದು ಸಚಿನ್ ಹೇಳಿದರು. ಸಚಿನ್ ನಿವೃತ್ತಿಯ ನಂತರ ಭಾರತದ ಕ್ರಿಕೆಟ್ ಸಾಗುತ್ತಿರುವ ದಿಕ್ಕಿನಿಂದ ಸಂತೋಷವಾಗಿದೆಯಾ ಎಂದು ಪ್ರಶ್ನಿಸಿದಾಗ ಸಚಿನ್ ಮೇಲಿನಂತೆ ಉತ್ತರಿಸಿದರು. ಇಡೀ ದೇಶ ನಿಮ್ಮನ್ನು ನೋಡುತ್ತಿರುವುದರಿಂದ ಅವರ ಗಮನ ಕಳೆದುಕೊಳ್ಳಬಾರದು. ಅವರ ನಿರೀಕ್ಷೆಗಳನ್ನು ಪೂರೈಸಲು ನೀವು ಬದ್ಧರಾಗಿರಬೇಕು ಎಂದು ತೆಂಡೂಲ್ಕರ್ ದಿ ವೀಕ್ ನಿಯತಕಾಲಿಕಕ್ಕೆ ನೀಡಿದ ಸಂದರ್ಶನದಲ್ಲಿ ಭಾರತೀಯ ಕ್ರಿಕೆಟ್ ತಂಡಕ್ಕೆ ಕಿವಿಮಾತು ಹೇಳಿದರು.
ಪ್ರಸಕ್ತ ಭಾರತೀಯ ಬ್ಯಾಟ್ಸ್ಮನ್ಗಳು ಸ್ಪಿನ್ಗೆ ಸುಲಭವಾಗಿ ಪ್ರಭಾವಿತರಾಗುತ್ತಾರೆಂಬ ಕಲ್ಪನೆಯನ್ನು ತಳ್ಳಿಹಾಕಿದ ಅವರು , ನಾನು ಹಾಗೆ ಭಾವಿಸುವುದಿಲ್ಲ. ಮುಂಚೆ ವಿದೇಶಿಯರಿಗೆ ಭಾರತದಲ್ಲಿ ಆಡುವುದಕ್ಕೆ ಸಾಕಷ್ಟು ಅವಕಾಶವಿರಲಿಲ್ಲ. ಈಗ ಮೇಲಿನ ಕ್ರಮಾಂಕದ ನಾಲ್ಕೈದು ಆಟಗಾರರು ಐಪಿಎಲ್ ಭಾಗವಾಗಿದ್ದಾರೆ. ಕೋಚ್ಗಳು ಕೂಡ ಭಾರತದಲ್ಲಿ ಹೆಚ್ಚು ಸಮಯ ಕಳೆಯುತ್ತಿದ್ದು, ಭಾರತದ ಪರಿಸ್ಥಿತಿಗೆ ಹೊಂದಿಕೊಂಡಿದ್ದಾರೆ ಎಂದು ಸಚಿನ್ ಹೇಳಿದರು.