ಬಾಂಗ್ಲಾದೇಶದ ವಿರುದ್ಧ ಬುಧವಾರ ಏಷ್ಯಾ ಕಪ್ ಆರಂಭಿಕ ಪಂದ್ಯದಲ್ಲಿ ಧೋನಿ ಆಡುವ ಬಗ್ಗೆ ಅನಿಶ್ಚಿತತೆ ನೆಲೆಸಿದೆ. ಧೋನಿ ಮೈದಾನಕ್ಕೆ ತಂಡದ ಜತೆಗೂಡಿದ್ದರೂ ಸಂಪೂರ್ಣ ಅಭ್ಯಾಸದ ಶಿಬಿರದಿಂದ ತಪ್ಪಿಸಿಕೊಂಡಿದ್ದರು. ಬೆನ್ನಿನ ಸ್ನಾಯು ಸೆಳೆತತಕ್ಕೆ ಚಿಕಿತ್ಸೆ ಪಡೆಯುತ್ತಿರುವ ಧೋನಿ ಮಿರ್ಪುರ ಪಂದ್ಯದಲ್ಲಿ ಲಭ್ಯತೆ ಕುರಿತು ಯಾವುದೇ ಸ್ಪಷ್ಟನೆ ಸಿಕ್ಕಿಲ್ಲ. ಉಪನಾಯಕ ಕೊಹ್ಲಿ ಕೂಡ ಸ್ಪಷ್ಟ ಪ್ರತಿಕ್ರಿಯೆ ನೀಡದೇ ನುಣುಚಿಕೊಂಡರು.
ಪಂದ್ಯ ಪೂರ್ವ ದಿನಗಳಲ್ಲಿ ಅನೇಕ ಆಟಗಾರರು ಅಭ್ಯಾಸ ಮಾಡದಿದ್ದರೂ, ಧೋನಿ ಸಾಮಾನ್ಯವಾಗಿ ಫುಟ್ಬಾಲ್ ಆಡಿ ನೆಟ್ನಲ್ಲಿ ಬ್ಯಾಟಿಂಗ್ ಅಭ್ಯಾಸ ಮಾಡುತ್ತಿದ್ದರು. ಧೋನಿ ಅಭ್ಯಾಸದ ಸೆಷನ್ನಲ್ಲಿ ಯಾವುದೇ ರೀತಿಯ ವ್ಯಾಯಾಮ ಮಾಡದಿದ್ದರೂ ಮೈದಾನಕ್ಕೆ ತೆರಳುವ ಮುಂಚೆ ಸ್ವಲ್ಪ ವ್ಯಾಯಾಮ ಮಾಡುತ್ತಿದ್ದರು.
ಟಾಸ್ಗೆ ಮುನ್ನ 11 ಆಟಗಾರರ ತಂಡವನ್ನು ಪ್ರಕಟಿಸುವ ತನಕ ಧೋನಿ ಆಯ್ಕೆಯನ್ನು ತಳ್ಳಿಹಾಕುವಂತಿಲ್ಲ. ಧೋನಿ ಬೆನ್ನು ಸ್ನಾಯುಸೆಳೆತಕ್ಕೆ ಒಳಗಾಗಿದ್ದು, ಅವರಿಗೆ ಬದಲಿಯಾಗಿ ಪಾರ್ಥಿವ್ ಪಟೇಲ್ ಅವರಿಗೆ ಕರೆಕಳುಹಿಸಲಾಗಿದೆ. ಧೋನಿ ತರಬೇತಿ ಶಿಬಿರದಲ್ಲಿ ಪಾಲ್ಗೊಳ್ಳದಿದ್ದರೂ, ಅವರ ತಂಡದ ಆಟಗಾರರು ಖಾನ್ ಸಾಹೇಬ್ ಒಸ್ಮಾನ್ ಅಲಿ ಸ್ಟೇಡಿಯಂನಲ್ಲಿ ಅಭ್ಯಾಸ ಮಾಡುವುದನ್ನು ವೀಕ್ಷಿಸಿದರು.