Select Your Language

Notifications

webdunia
webdunia
webdunia
webdunia

ಹರಳು, ಆಭರಣ ವಲಯಕ್ಕೆ ಬಜೆಟ್ ಮಿಶ್ರಫಲ

ಹರಳು, ಆಭರಣ ವಲಯಕ್ಕೆ ಬಜೆಟ್ ಮಿಶ್ರಫಲ
ನವದೆಹಲಿ , ಸೋಮವಾರ, 6 ಜುಲೈ 2009 (17:15 IST)
ಸೋಮವಾರ ಮಂಡನೆಯಾದ ಕೇಂದ್ರ ಬಜೆಟ್‌ನಲ್ಲಿ ಬ್ರಾಂಡೆಡ್ ಆಭರಣಗಳಿಗೆ ಸುಂಕ ವಿನಾಯಿತಿ ನೀಡಿರುವುದರಿಂದ ಹರಳು ಮತ್ತು ಆಭರಣ ವಲಯಗಳು ಕೊಂಚ ನಿರಾಳತೆಯನ್ನು ಅನುಭವಿಸಿದರೂ ಚಿನ್ನದ ಮೇಲಿನ ಸೀಮಾ ಸುಂಕ ಹೆಚ್ಚಳಕ್ಕೆ ನಿರಾಸೆ ವ್ಯಕ್ತಪಡಿಸಿವೆ.

"ಹರಳು ಮತ್ತು ಆಭರಣ ಉದ್ಯಮಕ್ಕೆ ಬಜೆಟ್ ಹೆಚ್ಚಿನ ಪ್ರೋತ್ಸಾಹ ನೀಡಿಲ್ಲ" ಎಂದು ಹರಳು ಮತ್ತು ಆಭರಣಗಳ ರಫ್ತು ವ್ಯವಹಾರದ ಅಭಿವೃದ್ಧಿ ಮಂಡಳಿ ಅಧ್ಯಕ್ಷ ವಸಂತ್ ಮೆಹ್ತಾ ತಿಳಿಸಿದ್ದಾರೆ.

"ನಾವು ಕೇಳಿದ್ದ ಸೀಮಾ ಸುಂಕ ವಿನಾಯಿತಿಯನ್ನು ನೀಡಲಾಗಿಲ್ಲ. ನಾವು ಅಂತಾರಾಷ್ಟ್ರೀಯ ಸ್ಪರ್ಧಿಗಳ ಜತೆ ಗುರುತಿಸಿಕೊಳ್ಳಲು ಕಷ್ಟವಾಗುವ ಕಾರಣದಿಂದ ದೇಶದ ರಫ್ತು ವ್ಯವಹಾರಕ್ಕೆ ಹೊಡೆತ ಬೀಳಬಹುದು. ಆರ್ಥಿಕ ಹಿಂಜರಿತದಂತಹ ಕಾಲದಲ್ಲಿ ನಾವು ಸ್ಪರ್ಧಾತ್ಮಕವಾಗಿರಬೇಕಾದ ಅಗತ್ಯವಿದೆ" ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಭಾರತದ ವಿದೇಶಿ ವಿನಿಮಯದಲ್ಲಿ ಹರಳು ಮತ್ತು ಆಭರಣಗಳ ಕೊಡುಗೆ ಶೇಕಡಾ 12ರಷ್ಟಿದೆ.

ಶೇಕಡಾ ಎರಡರ ಸುಂಕವನ್ನು ಮಾರ್ಚ್ 2010ರವರೆಗೆ ಕಡಿತಗೊಳಿಸಿರುವುದರಿಂದ ಪ್ರಸಕ್ತ ಉದ್ಯಮ ಇದರ ಲಾಭ ಪಡೆಯಬಹುದು. ಈ ವಲಯವು ಹೆಚ್ಚುವರಿ ಶೇಕಡಾ 2ರ ಸಹಾಯಧನ ನೀಡಬೇಕೆಂಬ ಬೇಡಿಕೆಯನ್ನು ಮುಂದಿಟ್ಟಿತ್ತು.

"ಬ್ರಾಂಡೆಡ್ ಆಭರಣಗಳ ಮೇಲಿನ ಶೇಕಡಾ 2 ಸುಂಕವನ್ನು ಕಡಿತಗೊಳಿಸಿರುವುದು ಶುಭ ಸುದ್ದಿ. ಆದರೆ ಚಿನ್ನದ ಬೆಲೆ ಏರಿಕೆ ಮತ್ತು ಇತರ ಸುಂಕಗಳನ್ನು ಕಡಿಮೆ ಮಾಡದಿರುವುದು ನಿರಾಸೆ ತಂದಿದೆ" ಎಂದು ಗೀತಾಂಜಲಿ ಜೆಮ್ಸ್‌ನ ಅಧ್ಯಕ್ಷ ಮೆಹೂಲ್ ಚೋಕ್ಸಿ ತಿಳಿಸಿದ್ದಾರೆ.

ಸೋಮವಾರ ಪ್ರಣಬ್ ಮುಖರ್ಜಿಯವರು ಮಂಡಿಸಿದ ಕೇಂದ್ರ ಬಜೆಟ್‌ನಲ್ಲಿ ಬ್ರಾಂಡೆಡ್ ಆಭರಣಗಳ ಮೇಲಿದ್ದ ಶೇಕಡಾ 2ರ ತೆರಿಗೆಯನ್ನು ಸುಂಕಮುಕ್ತವನ್ನಾಗಿಸಿತ್ತು. ಆದರೆ ಸೀಮಾಸುಂಕದಲ್ಲಿ ಭಾರೀ ಪ್ರಮಾಣದಲ್ಲಿ ಏರಿಕೆ ಮಾಡಿರುವುದು ಅಸಮಾಧಾನಕ್ಕೆ ಕಾರಣವಾಗಿದೆ.

ಚಿನ್ನದ ಗಟ್ಟಿ ಮತ್ತು ಚಿನ್ನದ ನಾಣ್ಯಗಳ ಮೇಲಿನ ಸೀಮಾ ಸುಂಕ ಹೆಚ್ಚಳ 10 ಗ್ರಾಮಿಗೆ 100 ರೂಪಾಯಿಯಂತೆ ಪ್ರಸಕ್ತ 200 ರೂಪಾಯಿಗೆ ತಲುಪಿದೆ. ಚಿನ್ನದ ಇತರ ರೂಪಗಳಿಗೆ ಪ್ರತಿ ಕೆ.ಜಿ.ಯಲ್ಲಿ 250 ರೂ. ಸೀಮಾ ಸುಂಕ ಏರಿಕೆ, ಅಂದರೆ ಈಗ 500 ರೂಪಾಯಿ. ಬೆಳ್ಳಿಯ ಮೇಲಿನ ಸೀಮಾ ಸುಂಕ ಕಿಲೋಗೆ 500 ಇದ್ದದ್ದು 1000 ರೂ.ಗೆ ಏರಿಕೆ. ಇದು ಚಿನ್ನ ಮತ್ತು ಬೆಳ್ಳಿಯನ್ನೊಳಗೊಂಡ ಆಭರಣಗಳಿಗೂ ಅನ್ವಯವಾಗಲಿದೆ ಎಂದು ಬಜೆಟ್‌ನಲ್ಲಿ ತಿಳಿಸಲಾಗಿದೆ.

Share this Story:

Follow Webdunia kannada