ಹಣವಿದ್ದರೆ ನೀ ದಿನಕರನಂತೆ ಇಲ್ಲದಿದ್ದರೆ ಶ್ವಾನದಂತೆ ಎಂದು ಡಾ. ರಾಜ್ ಕುಮಾರ್ ಅವರ ಅಭಿನಯದ ಹಳೆಯ ಚಿತ್ರಗೀತೆಯ ಸಾಲು ನೆನಪಾಗುತ್ತದೆ ಮಾಜಿ ವೇಗದ ಬೌಲರ್ ಶ್ರೀಶಾಂತ್ ಅವರ ಬದುಕಿನ ಬೆಳವಣಿಗೆ ಕಂಡಾಗ. ಮ್ಯಾಚ್ ಫಿಕ್ಸಿಂಗ್ ನಲ್ಲಿ ಸಿಕ್ಕಿ ಹಾಕಿಕೊಂಡು ಆ ಬಳಿಕ ತಾನು ತಪ್ಪಿತಸ್ಥ ಅಲ್ಲ ಎಂದು ಮಾಧ್ಯಮಗಳ ಮುಂದೆ ಗೋಳಾಡಿ, ಅದಾದ ಬಳಿಕ ರಾಜಸ್ಥಾನಿ ಹೆಣ್ಣು ಮಗಳಾದ ಭುವನೇಶ್ವರಿ ಕುಮಾರಿ ಜೊತೆ ಮದುವೆ ಆದ ಶ್ರೀಶಾಂತ್ ಅವರ ಬದುಕಿನ ಜೊತೆ ಕನ್ನಡ ಲಕ್ಷ್ಮಿ ರೈ, ಶ್ವೇತ ಶ್ರೀವಾತ್ಸವ್, ಸಂಜನಾ ಗಲ್ರಾಣಿ ಅವರುಗಳ ಹೆಸರು ಸೇರಿಕೊಂಡು ಸಾಕಷ್ಟು ಸುದ್ದಿ ಮಾಡಿತ್ತು. ಆದರೆ ಈ ಹಣವಂತನ ಬದುಕಲ್ಲಿ ಕ್ರಿಕೆಟ್ ಇಲ್ಲದೆ ಇದ್ದರೇನು ದುಡ್ಡಿದೆ ಎನ್ನುವಂತೆ ಈಗ ಚಿತ್ರರಂಗದಲ್ಲಿ ತಮ್ಮನ್ನು ಬೆಳೆಸಿಕೊಳ್ಳಲು ಹೊರಟಿದ್ದಾರೆ.
ಈ ಮೊದಲು ಹಿಂದಿ ಡ್ಯಾನ್ಸ್ ರಿಯಾಲಿಟಿ ಷೋ ನಲ್ಲಿ ಭಾಗಿಯಾಗಿದ್ದ ಶ್ರೀಶಾಂತ್, ಅದಾದ ಬಳಿಕ ಟಾಲಿವುಡ್ ಚಿತ್ರದಲ್ಲಿ ಖಳ ನಟರಾಗಿ ಅಭಿನಯಿಸುವ ಅವಕಾಶ ಪಡೆದರು. ಅಲ್ಲದೆ ಮಲೆಯಾಳಂ ಚಿತ್ರದಲ್ಲಿ ಪ್ರಧಾನ ಪಾತ್ರಧಾರಿ ಆಗಿ ಸೆಲೆಕ್ಟ್ ಆದ ಶ್ರೀ ಈಗ ಬಾಲಿವುಡ್ ಚಿತ್ರ ಒಂದಕ್ಕೆ ಹೀರೋ ಆಗಿದ್ದಾರೆ.
ಪೂಜಾ ಭಟ್ ಅವರ ನಿರ್ಮಾಣದ ಚಿತ್ರ ಕ್ಯಾಬರೆಟ್ ನಲ್ಲಿ ಶ್ರೀಶಾಂತ್ ಗೆ ಅವಕಾಶ ಸಿಕ್ಕಿದೆ. ರಿಚಾ ಚೆಡ್ಡ ಇದರ ಹೀರೋಯಿನ್. ತಮ್ಮ ಪಾತ್ರಕ್ಕೆ ಅಗತ್ಯವಾದ ಚುರುಕುತನ ಶ್ರೀಶಾಂತ್ ನಲ್ಲಿ ಇರುವ ಕಾರಣ ಅವರನ್ನೇ ಈ ಪಾತ್ರಕ್ಕೆ ಆಯ್ಕೆ ಮಾಡಿಕೊಂಡರಂತೆ ಪೂಜಾ ಮೇಡಂ. ಅವಕಾಶಕ್ಕಾಗಿ ಕಾಯುತ್ತಿರುವ ಅಸಂಖ್ಯಾತ ಪ್ರತಿಭಾವಂತರಿಗೆ ದೊರಕದ ಒಂದು ಪುಟ್ಟ ಅವಕಾಶ ಇನ್ನು ಒಂದು ಚಿತ್ರದಲ್ಲೂ ನಟಿಸದ ಶ್ರೀಶಾಂತ್ ಗೆ ದೊರಕುತ್ತಿದೆ ಎಂದರೆ ..! ಅದಕ್ಕೆ ನಾವು ಆರಂಭದಲ್ಲಿ ಹೇಳಿದ್ದು ಹಣವಿದ್ದರೆ ನೀ ದಿನಕರನಂತೆ ಇಲ್ಲ ದಿದ್ದರೆ... !