ತಾವೇ ಮುಖ್ಯ ಭೂಮಿಕೆಯಲ್ಲಿರುವ ‘ಭಜರಂಗಿ ಭಾಯ್ಜಾನ್’ ಚಿತ್ರವನ್ನು ವೀಕ್ಷಿಸಿದ ಬಳಿಕ ಬಾಲಿವುಡ್ ಸೂಪರ್ ಸ್ಟಾರ್ ಸಲ್ಮಾನ್ ಖಾನ್ ಕಣ್ಣೀರು ಹಾಕಿದ್ದಾರೆ. ಹಾಗೆಂದು ಬಿ ಟೌನ್ನಲ್ಲಿ ಸುದ್ದಿ ಹರಿದಾಡುತ್ತಿದೆ.
ಬಿಡುಗಡೆಗೆ ಸಿದ್ಧವಾಗಿರುವ ಈ ಸಿನಿಮಾದ ಪೂರ್ವ ವೀಕ್ಷಣೆಗಾಗಿ ಮುಂಬೈನಲ್ಲಿ ಚಿತ್ರರಂಗದ ಗಣ್ಯರನ್ನು ಆಮಂತ್ರಿಸಲಾಗಿತ್ತು. ಈ ಸಂದರ್ಭದಲ್ಲಿ ಚಿತ್ರದ ನಾಯಕ ನಟ ಸಲ್ಲು ಕೂಡ ಹಾಜರಿದ್ದರು. ಸ್ವಭಾವತಃ ಸಲ್ಲು ಭಾವುಕ ವ್ಯಕ್ತಿ ಎಂಬುದು ಎಲ್ಲರಿಗೂ ಗೊತ್ತಿರುವ ವಿಷಯವಷ್ಟೇ!. ಚಿತ್ರದ ಸಂಪೂರ್ಣ ಕಥೆಯನ್ನು ಸಿನಿಮಾ ನೋಡಿದ ಬಳಿಕವಷ್ಟೇ ತಿಳಿದುಕೊಂಡ ಸಲ್ಲು ಚಿತ್ರ ಮುಗಿಯುತ್ತಿದ್ದಂತೆ ಕಣ್ಣೀರು ಹರಿಸುತ್ತಿದ್ದರೆಂದು ವರದಿಯಾಗಿದೆ. ಚಿತ್ರ ಅದ್ಭುತವಾಗಿ ಮೂಡಿಬಂದುದಕ್ಕೆ ನಟ ಭಾವುಕರಾದರು ಎಂದು ಹೇಳಲಾಗುತ್ತಿದೆ.
ಈ ಹಿಂದೆ ಚಿತ್ರದ ಟ್ರೈಲರ್ ನೋಡಿದ ಬಳಿಕವೂ ಸಲ್ಮಾನ್ ಭಾವುಕರಾಗಿ ಕಣ್ಣೀರು ಹಾಕಿದ್ದರಂತೆ.
ಪಾಕಿಸ್ತಾನದಿಂದ ಅಚಾನಕ್ಕಾಗಿ ಭಾರತಕ್ಕೆ ಬರುವ ಕಿವುಡ ಹುಡುಗಿಯ ಕಥಾಹಂದರವನ್ನು ಹೊಂದಿದೆ ಈ ಸಿನಿಮಾ. ಹುಡುಗಿಯನ್ನು ರಕ್ಷಿಸುವ ಸಲ್ಮಾನ್ ಆಕೆಯನ್ನು ಪಾಕಿಸ್ತಾನಕ್ಕೆ ಹೇಗೆ ಮರಳಿ ತಲುಪಿಸುತ್ತಾನೆ ಎಂಬುದೇ ಕಥಾ ವಸ್ತು.
ಈ ಚಿತ್ರದಲ್ಲಿ ಕರೀನಾ ಕಪೂರ್, ನವಾಜುದ್ದಿನ್ ಸಿದ್ದಿಕ್ಕಿ ಕೂಡ ಇದ್ದು, ಜುಲೈ 17 ರಂದು ಚಿತ್ರ ತೆರೆ ಕಾಣಲಿದೆ.