ಸಂಗೀತ ಸಂಯೋಜಕ ಆದೇಶ್ ಶ್ರೀವಾಸ್ತವ್ ನಿಧನ
ಮುಂಬೈ , ಶನಿವಾರ, 5 ಸೆಪ್ಟಂಬರ್ 2015 (10:32 IST)
ಬಾಲಿವುಡ್ನ ಪ್ರಖ್ಯಾತ ಸಂಗೀತ ಸಂಯೋಜಕ ಆದೇಶ್ ಶ್ರೀವಾಸ್ತವ್ (51) ಅವರು ಶುಕ್ರವಾರ- ಶನಿವಾರದ ನಡುವಿನ ರಾತ್ರಿ 12.30 ರ ಸುಮಾರಿಗೆ ಕೊನೆಯುಸಿರೆಳೆದಿದ್ದಾರೆ. ಕಳೆದ ಹಲವಾರು ವರ್ಷಗಳಿಂದ ಕ್ಯಾನ್ಸರ್ನಿಂದ ಬಳಲುತ್ತಿದ್ದ ಅವರ ಆರೋಗ್ಯ ತೀರ ಹದಗೆಟ್ಟಿದ್ದರಿಂದ ಮುಂಬೈನ ಕೊಕಿಲಾಬೆನ್ ಧೀರೂಬಾಯಿ ಅಂಬಾನಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಕಳೆದ 40 ದಿನಗಳ ಹಿಂದೆ ಆಸ್ಪತ್ರೆಗೆ ದಾಖಲಾಗಿದ್ದ ಅವರು ಇಂದು 12.30ರ ಸುಮಾರಿಗೆ ನಿಧನರಾಗಿದ್ದಾರೆ ಎಂದು ಆಸ್ಪತ್ರೆಯ ವೈದ್ಯರು ಖಚಿತ ಪಡಿಸಿದ್ದಾರೆ. ಕಾಯಿಲೆ ಕೊನೆಯ ಹಂತಕ್ಕೆ ತಲುಪಿದ್ದರಿಂದ ಆದೇಶ್ ಅವರಿಗೆ ಕಿಮೊತೆರಪಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಕೆಲದಿನಗಳಿಂದ ಕಿಮೊತೆರಪಿ ಚಿಕಿತ್ಸೆಗೆ ಅವರು ಸ್ಪಂದಿಸದ ಕಾರಣ ಅದನ್ನು ನಿಲ್ಲಿಸಲಾಗಿತ್ತು ಎಂದು ಆದೇಶ್ ಹತ್ತಿರದ ಸಂಬಂಧಿಯೊಬ್ಬರು ಹೇಳಿದ್ದಾರೆ.
2010ರಲ್ಲಿ ಅವರಿಗೆ ಮಲ್ಟಿಪಲ್ ಮೈಲೋಮಾ (ಪ್ಲಾಸ್ಮಾ ಕಣಗಳ ಕ್ಯಾನ್ಸರ್) ಕಾಯಿಲೆ ಇರುವುದು ಪತ್ತೆಯಾಗಿತ್ತು. ಆದರೆ ಎದೆಗುಂದದ ಅವರು ಅದನ್ನು ಮೆಟ್ಟಿ ನಿಲ್ಲುವಂತೆ ಬದುಕಿ ತೋರಿಸಿದ್ದರು.
ಪತ್ನಿ, ನಟಿ ವಿಜೇತಾ ಪಂಡಿತ್, ಮಕ್ಕಳಾದ ಅನಿವೇಶ್, ಅವಿತೇಶ್ ಸಂಗೀತ ಸಂಯೋಜಕ ಸಹೋದರರಾದ ಜತೀನ್ ಮತ್ತು ಲಲಿತ್ ಪಂಡಿತ್ ಅವರನ್ನವರು ಅಗಲಿದ್ದಾರೆ.
ಚಲ್ತೆ ಚಲ್ತೆ, ಬಾಗ್ಬನ್, ಕಭೀ ಖುಷಿ ಕಭೀ ಘಮ್ ಚಿತ್ರಗಳು ಅರಿಗೆ ಹೆಸರನ್ನು ತಂದುಕೊಟ್ಟಿದ್ದವು.