ಅಮೀರ್ ಖಾನ್ ಗೆ ಇದು ಸಂಕಷ್ಟದ ಕಾಲ. ಮಾಡಿದ ತಪ್ಪಿಗೆ ಪ್ರಾಯಶ್ಚಿತ ಅನುಭವಿಸೋ ಸಮಯ. ಇನ್ಕ್ರೆಡಿಬಲ್ ಇಂಡಿಯಾ ಅಭಿಯಾನದ ಬಳಿಕ ಈಗ ರಸ್ತೆ ಸುರಕ್ಷೆ ಅಭಿಯಾನದಿಂದಲೂ ನಟ ಅಮೀರ್ ಖಾನ್ ಅವರನ್ನು ಕೈಬಿಡಲಾಗಿದೆ ಎಂದು ವರದಿಯಾಗಿದೆ. ಕಳೆದ ವರ್ಷ ಸಾರಿಗೆ ಸಚಿವ ನಿತಿನ್ ಗಡ್ಕರಿಯೇ ಸ್ವತಃ ಅಮೀರ್ ಖಾನ್ ಅವರನ್ನು ಭೇಟಿ ಮಾಡಿ ರಸ್ತೆ ಸುರಕ್ಷತೆಯ ಜಾಹೀರಾತುಗಳಲ್ಲಿ ರಾಯಭಾರಿಯಾಗಿ ನಟಿಸಲು ವಿನಂತಿಸಿದ್ದರು.
ಆಮೀರ್ ಸಂಭಾವನೆ ಪಡೆಯದೆ ನಟಿಸಲು ಅದಕ್ಕೆ ಒಪ್ಪಿದ್ರು. ಆದರೆ ಜಾಹೀರಾತು ಪ್ರಸಾರ ಶುರುವಾಗುವ ಮೊದಲೇ ಅಭಿಯಾನದಿಂದ ಆಮೀರ್ ಖಾನ್ರನ್ನು ಕೈಬಿಡಲಾಗಿದೆ ಎಂದು ಮೂಲಗಳು ಹೇಳಿವೆ. ಸತ್ಯಮೇವ ಜಯತೆಯಲ್ಲಿ ರಸ್ತೆ ಅವಘಡಗಳ ಕುರಿತು ಅಮೀರ್ ನಡೆಸಿಕೊಟ್ಟ ಕಾರ್ಯಕ್ರಮವನ್ನು ನೋಡಿ ಪ್ರಭಾವಿತರಾಗಿದ್ದ ಗಡ್ಕರಿ ರಸ್ತೆ ಅಭಿಯಾನಕ್ಕೆ ರಾಯಭಾರಿಯಾಗುವಂತೆ ಕೋರಿದ್ದರು.
ಆದ್ರೀಗ ಅಮೀರ್ ಖಾನ್ ರ ಅಸಹಿಷ್ಣುತೆ ಹೇಳಿಕೆಗೆ ದೇಶಾದ್ಯಂತ ತೀವ್ರಟೀಕೆಗೆ ಗುರಿಯಾಗಿರೋದ್ರಿಂದ ಅಮೀರ್ ಗೆ ರಸ್ತೆ ಸುರಕ್ಷೆ ಅಭಿಯಾನದ ಜಾಹೀರಾತಿನಿಂದಲೂ ಕೋಕ್ ನೀಡಲಾಗಿದೆ. ಅಮೀರ್ ಖಾನ್ ಸತ್ಯಮೇವ ಜಯತೆ ಕಾರ್ಯಕ್ರಮ ನಡೆಸಿಕೊಡೋದಕ್ಕೆ ಶುರುಮಾಡಿದಾಗಿನಿಂದ ಅವ್ರ ಜಾಹೀರಾತಿನ ಬೇಡಿಕೆ ಹೆಚ್ಚಾಗಿತ್ತು. ಆದ್ರೆ ಅಮೀರ್ ಕೆಲವು ತಿಂಗಳ ಹಿಂದೆ ನೀಡಿದ್ದ ಅಸಹಿಷ್ಣುತೆಯ ಹೇಳಿಕೆ ಅವರ ಜನಪ್ರಿಯತೆಯನ್ನ ಕುಗ್ಗಿಸುತ್ತಿರೋದ್ದಂತೂ ಸುಳ್ಳಲ್ಲ.