ಪೊಂಗಲ್ ಹಬ್ಬದಲ್ಲಿ ತಮಿಳು ಜನಾಂಗದ ಅತೀ ಮುಖ್ಯ ಆಚರಣೆ ಜಲ್ಲಿಕಟ್ಟು. ಗೂಳಿಗಳನ್ನು ಪಳಗಿಸುವ ಸಾಂಪ್ರದಾಯಿಕ ಕ್ರೀಡೆ ಜಲ್ಲಿಕಟ್ಟು ಬಗ್ಗೆ ವಿವಾದದ ಕಿಡಿ ಸ್ಫೋಟಿಸಿತು. ಸಂಪ್ರದಾಯದ ಹೆಸರಿನಲ್ಲಿ ಗೂಳಿಗಳನ್ನು ಕ್ರೂರವಾಗಿ ಹಿಂಸಿಸಲಾಗುತ್ತಿದೆ ಎಂಬ ಕಾರಣದ ಮೇಲೆ ಜಲ್ಲಿಕಟ್ಟು ಆಟವನ್ನು ನಿಷೇಧಿಸುವಂತೆ ಕೋರಿ ಪ್ರಾಣಿ ದಯಾ ಮಂಡಳಿಯು ಸುಪ್ರೀಂಕೋರ್ಟ್ ಮೆಟ್ಟಿಲು ಹತ್ತಿತು.
WD
ಈ ವಾರದ ನಂಬಿದರೆ ನಂಬಿ ಬಿಟ್ಟರೆ ಬಿಡಿ ಸರಣಿಯಲ್ಲಿ ನಾವು ನಿಮಗೆ ತಮಿಳುನಾಡು ಮಧುರೈ ಜಿಲ್ಲೆಯ ಪ್ರಖ್ಯಾತ ಅಲಂಗನಲ್ಲೂರು ಮತ್ತು ಪಲಮೇಡುವಿನಲ್ಲಿ ಈ ಆಟದ ಪ್ರತ್ಯಕ್ಷ ದರ್ಶನ ಮಾಡಿಸುತ್ತಿದ್ದು, ಇದೊಂದು ಪರಾಕ್ರಮದ, ಶೌರ್ಯದ ಕ್ರೀಡೆಯೋ ಅಥವಾ ಅಸ್ವೀಕಾರಾರ್ಹ ಸಂಪ್ರದಾಯವೋ ಎಂದು ಸ್ವತಃ ನೀವೇ ತೀರ್ಮಾನಿಸಲು ಸಾಧ್ಯವಾಗುತ್ತದೆ.
ಅನಾದಿ ಕಾಲದಿಂದಲೂ ಜಲ್ಲಿಕಟ್ಟು ತಮಿಳರ ಸಾಂಪ್ರದಾಯಿಕ ಕ್ರೀಡೆಯಾಗಿ ವಿಜೃಂಭಿಸಿದೆ. ಗೂಳಿಯನ್ನು ಮಣಿಸಲು ಶಕ್ತರಾದ ಪುರುಷರನ್ನು ಮಾತ್ರ ಆಗಿನ ಕಾಲದ ಯುವತಿಯರು ವಿವಾಹವಾಗುತ್ತಿದ್ದರೆಂದು ಪ್ರಾಚೀನ ಸಾಹಿತ್ಯದಲ್ಲಿ ಉಲ್ಲೇಖಿಸಲಾಗಿದೆ.
WD
ಹಿಂದಿನ ಕಾಲದಲ್ಲಿ ಏಕೈಕ ವ್ಯಕ್ತಿಯೊಬ್ಬ ಮಾತ್ರ ತನ್ನ ಜೀವವನ್ನೇ ಒತ್ತೆಯಿಟ್ಟು ಗೂಳಿಯನ್ನು ಮಣಿಸುತ್ತಿದ್ದನೆಂದು ಪ್ರತೀತಿಯಿದೆ. ಮೊಹೆಂಜದಾರೊ ಮತ್ತು ಹರಪ್ಪನ್ ಸಂಸ್ಕೃತಿಯ ಉತ್ಖನನಗಳಲ್ಲಿ ಕೂಡ ಈ ಕ್ರೀಡೆಯ ಬಗ್ಗೆ ಸಾಕ್ಷ್ಯಾಧಾರಗಳು ಸಿಕ್ಕಿವೆ.
ಕಳೆದ 400 ವರ್ಷಗಳಿಂದ ಜಲ್ಲಿಕಟ್ಟುವಿಗೆ ವಿಶೇಷವಾಗಿ ತರಬೇತಾದ, ಹರಿತವಾದ ಕೊಂಬುಗಳಿರುವ ಗೂಳಿಗಳಿಂದ ಯಾವುದಾದರೂ ಸ್ಪರ್ಧಿಯೊಬ್ಬರು ಗೂಳಿಯನ್ನು ಮಣಿಸುತ್ತಿದ್ದರು.(ಈ ಬಾರಿ ಸ್ಪರ್ಧಿಗಳಿಗೆ ಗಾಯ ತಪ್ಪಿಸಲು ಗೂಳಿಯ ಕೊಂಬನ್ನು ಮೊಂಡು ಮಾಡುವಂತೆ ಆದೇಶ ನೀಡಲಾಗಿದೆ).
WD
ಕ್ರೀಡೆಯಲ್ಲಿ ಪಾಲ್ಗೊಳ್ಳುವ ಪುರುಷನಿಗಿಂತ 10 ಪಟ್ಟು ಬಲಶಾಲಿಯಾದ ಗೂಳಿಯನ್ನು ಮಣಿಸುವ ಕ್ರೀಡೆ ಶೌರ್ಯ, ಸಾಹಸದ ಕ್ರೀಡೆ ಎಂದು ತಮಿಳು ಜನಾಂಗ ಪರಿಗಣಿಸಿದ್ದಾರೆ. ಆದರೆ ಪ್ರಾಣಿ ದಯಾ ಮಂಡಳಿ ಮತ್ತು ಕೋರ್ಟ್ ಈ ಕ್ರೀಡೆಯನ್ನು ಅನಾಗರಿಕ ಎಂದು ಪರಿಗಣಿಸಿ ನಿಷೇಧ ವಿಧಿಸಿತ್ತು. ಇದು ತಮ್ಮ ಸಂಪ್ರದಾಯವಲ್ಲದೇ ನಂಬಿಕೆ ಕೂಡ ಆಗಿರುವುದರಿಂದ ಈ ಕ್ರೀಡೆಯ ಆಚರಣೆಗೆ ನಿಷೇಧ ವಿಧಿಸುವುದರಿಂದ ತಾವು ಪೂಜಿಸುವ ದೈವದ ಶಾಪಕ್ಕೆ ಗುರಿಯಾಗಿ ಸಂಕಷ್ಟಗಳನ್ನು ಎದುರಿಸಬೇಕಾಗುತ್ತದೆ ಎಂದು ಜನರು ನಂಬಿದ್ದಾರೆ.
ತಮಿಳುನಾಡು ಸರ್ಕಾರದ ಭರವಸೆ ಆಧಾರದ ಮೇಲೆ ಸುಪ್ರೀಂಕೋರ್ಟ್ ಜಲ್ಲಿಕಟ್ಟುವಿಗೆ ವಿಧಿಸಿದ ನಿಷೇಧ ರದ್ದುಮಾಡಿದ್ದರಿಂದ ಕಳೆದ ಜನವರಿ 16ರಂದು ಪಲಮೇಡುವಿನಲ್ಲಿ ಮತ್ತು ವಿಶ್ವವಿಖ್ಯಾತ ಅಲಂಗನಲ್ಲೂರಿನಲ್ಲಿ 17ರಂದು ಜಲ್ಲಿಕಟ್ಟು ಕ್ರೀಡೆ ನೆರವೇರಿತು. ವಿದೇಶಿ ಪ್ರವಾಸಿಗಳು ಸೇರಿದಂತೆ ಸಾವಿರಾರು ಜನರು ಈ ಕ್ರೀಡೆಯನ್ನು ವೀಕ್ಷಿಸಿ ಸಂತೋಷಪಟ್ಟರು.
ನೀವು ಈ ಕ್ರೀಡೆಯ ಪ್ರತ್ಯಕ್ಷ ವಿಡಿಯೋ ವೀಕ್ಷಿಸಿ ಇದು ಪರಾಕ್ರಮದ ಕ್ರೀಡೆಯೋ ಅಥವಾ ಸಮಾಜದಲ್ಲಿ ಹಾಸುಹೊಕ್ಕಾಗಿ ಬೆಳೆದಿರುವ ಈ ಕ್ರೀಡೆ ಸ್ಥಾನ ಪಡೆಯಲು ಅರ್ಹವಲ್ಲವೇ ಎಂದು ನೀವೇ ತೀರ್ಮಾನಿಸಿ.