ಗುರುಬಲವೊಂದಿದ್ದರೆ ಸಾಕು ಜೀವನದಲ್ಲಿ
ಶೃಂಗೇರಿ , ಬುಧವಾರ, 30 ಅಕ್ಟೋಬರ್ 2013 (12:40 IST)
* ಜ್ಯೋತಿಷಿ : ಪರಮೇಶ್ವರ ಶೃಂಗೇರಿ
ಪ್ರತಿಯೊಬ್ಬನಿಗೂ ಗುರು ಬಲವೆಂಬುದು ಒಂದು ವಿಶಿಷ್ಟವಾದ ಸಾಧನೆಗೆ ಪೂರಕವಾದ ಅಂಶ. ಧನಕಾರಕ, ಜ್ಞಾನಕಾರಕ, ಪುತ್ರಕಾರನೂ ಆದ ಗುರುವು ಮಾನವನ ಜೀವನದ ಪ್ರಮುಖ ಅಂಶಗಳನ್ನು ನಿರ್ಣಯಿಸುವ ಪ್ರಭಾವಿ ಗ್ರಹವೆಂದರೂ ತಪ್ಪಲ್ಲ.ಹಾಗಾಗಿ ಗುರುವು ಜಾತಕದ ಕೇಂದ್ರಸ್ಥಾನವೆಂದು ಕರೆಯಲ್ಪಡುವ ಲಗ್ನ,ಚತುರ್ಥ,ಸಪ್ತಮ,ದಶಮ ಭಾವಗಳಲ್ಲಿ ಇದ್ದರೆ ಎಲ್ಲಾ ಬಗೆಯ ದೋಷವನ್ನೂ ನಾಶಮಾಡುತ್ತಾನೆ ಎಂಬ ಅಭಿಪ್ರಾಯ ಜ್ಯೋತಿಷ್ಯ ಶಾಸ್ತ್ರಗಳಲ್ಲಿ ವ್ಯಕ್ತವಾಗಿವೆ.
ಲಗ್ನದಲ್ಲಿ ಗುರುವಿದ್ದರೆ ಜಾತಕನು ಸೌಂದರ್ಯವಂತನೂ,ದಾನ ಧರ್ಮಾದಿಗಳಲ್ಲಿ ಆಸಕ್ತಿ ಹೊಂದಿದವನೂ ಆಗಿದ್ದು, ದೀರ್ಘಾಯಸ್ಸು ಹೊಂದುವುದರ ಜೊತೆಗೆ ಸುಖಜೀವನ ನಡೆಸುತ್ತಾನೆ.ಅದೇ ರೀತಿ ದ್ವಿತೀಯದಲ್ಲಿದ್ದಾಗ ಸದ್ವಿಚಾರವಂತನೂ,ವಾಕ್ಚಾತುರ್ಯ ಹೊಂದಿದವನೂ,ಧನವಂತನೂ ಆಗಿದ್ದು ಶಾಸ್ತ್ರಗಳ ಅಧ್ಯಯನ ತತ್ಪರನಾಗಿರುತ್ತಾನೆ. ತೃತೀಯದಲ್ಲಿ ಗುರುವಿದ್ದರೆ ಉತ್ತಮ ಸಹೋದರನನ್ನು ಹೊಂದಿದ್ದರೂ ಪಾಪಕರ್ಮಗಳಲ್ಲಿ ನಿರತನಾಗಿದ್ದು ಜ್ಞಾನಹೀನನೂ, ಜಿಪುಣನೂ ಆಗುತ್ತಾನೆ ಎಂಬುದರಲ್ಲಿ ಸಂಶಯವಿಲ್ಲ. ಚತುರ್ಥದಲ್ಲಿ ಗುರುವಿದ್ದರೆ ಎಲ್ಲಾ ಬಗೆಯ ಪ್ರಾಪಂಚಿಕ ಸುಖ ಹೊಂದುವವನೂ,ತಾಯಿ,ಸಂಬಂಧಿಕರಲ್ಲಿ ಪ್ರೀತಿ ಉಳ್ಳವನೂ ಆಗುತ್ತಾನೆ.
ಪಂಚಮದಲ್ಲಿ ಗುರುವಿದ್ದಾಗ ಸಮಾಜದಲ್ಲಿ ಉತ್ತಮಸ್ಥಾನ ಗಳಿಸುವುದರ ಜೊತೆಗೆ ಉನ್ನತ ಅಧಿಕಾರವನ್ನು ಅನುಭವಿಸುತ್ತಾನೆ.ಆದರೆ ಪುತ್ರ ವರ್ಗದಿಂದ ಅತಿಶಯವಾದ ದುಃಖ ಅನುಭವಿಸುತ್ತಾನೆ.
ಷಷ್ಠದಲ್ಲಿ ಗುರುವಿದ್ದರೆ ಮಾಟಮಂತ್ರದಂತಹ ಅಭಿಚಾರ ವಿದ್ಯೆಗಳಲ್ಲಿ ಪರಿಣಿತನೂ, ಶತ್ರುಗಳನ್ನು ನಾಶಮಾಡುವವನೂ,ಅತ್ಯಂತ ಆಲಸಿಯೂ ಆಗುವ ಲಕ್ಷಣ ಹೊಂದಿರುತ್ತಾನೆ. ಗುರುವು ಸಪ್ತಮದಲ್ಲಿದ್ದರೆ ಉತ್ತಮ ಗುಣಗಳುಳ್ಳ ಪತ್ನಿಉಳ್ಳವನೂ ಪಿತ್ರಾರ್ಜಿತ ಆಸ್ತಿಯನ್ನು ಸಂಪೂರ್ಣವಾಗಿ ಭೋಗಿಸುವವನೂ,ಉದಾರಿಯೂ,ಆಗಿದ್ದು ಜೀವನ ಪೂರ್ತಿ ಸುಖವನ್ನು ಅನುಭವಿಸುತ್ತಾನೆ. ಅಷ್ಟಮದಲ್ಲಿ ಗುರುವಿದ್ದಾಗ ಬಡತನದಲ್ಲಿ ಜೀವನ ನಡೆಸುವವನೂ,ಸದಾ ಪಾಪಕರ್ಮ ನಿರತನೂ,ಅನಾರೋಗ್ಯ ಪೀಡಿತನೂ ಆಗಿದ್ದು ದೀರ್ಘಾಯಸ್ಸನ್ನು ಮಾತ್ರ ಹೊಂದುತ್ತಾನೆ. ಗುರುವು ನವಮದಲ್ಲಿದ್ದರೆ ಜಾತಕನು ಪದವಿಯನ್ನು ಅಲಂಕರಿಸುವುದರ ಜೊತೆಗೆ ಸತ್ಕಾರ್ಯತತ್ಪರನೂ ಆಗಿದ್ದು, ಕುಟುಂಬ ಸೌಖ್ಯವನ್ನು ಹೊಂದುತ್ತಾನೆ. ಇನ್ನು ದಶಮದಲ್ಲಿ ಗುರುವಿದ್ದಾಗ ಜಾತಕನು ಸದಾಚಾರ ಸಂಪನ್ನನೂ ವಾಹನಸುಖ,ಪತ್ನಿಸುಖ,ಹೀಗೆ ಹಲವು ಬಗೆಯ ಸುಖವನ್ನು ಅನುಭವಿಸುತ್ತಾನೆ.ಹೀಗೆ ಗುರುವು ಜಾತಕನ ಭವಿಷ್ಯದಲ್ಲಿ ಮಹತ್ತರ ಪಾತ್ರವಹಿಸುವುದು ನಿಶ್ಚಿತ.ಅಲ್ಲದೇ ಲಾಭಸ್ಥಾನದಲ್ಲಿ ಗುರುವಿದ್ದಾಗ ಸುಖಜೀವನ ನಡೆಸಲು ಬೇಕಾದ ಎಲ್ಲಾ ಬಗೆಯ ಸಹಕಾರ ದೊರೆಯುವುದು ಎಂಬುದರಲ್ಲಿ ಯಾವುದೇ ಸಂಶಯವಿಲ್ಲ.