Select Your Language

Notifications

webdunia
webdunia
webdunia
webdunia

ಸನ್ಯಾಸಯೋಗದತ್ತ ಜ್ಯೋತಿಷ್ಯ ಚಿಂತನೆ

ಸನ್ಯಾಸಯೋಗದತ್ತ ಜ್ಯೋತಿಷ್ಯ ಚಿಂತನೆ
, ಸೋಮವಾರ, 18 ನವೆಂಬರ್ 2013 (18:27 IST)
PR
ಪರಮೇಶ್ವರ ಶೃಂಗೇರಿ

ಹಿಂದೂ ಧರ್ಮದ ಪ್ರಕಾರ ಪ್ರತಿಯೊಬ್ಬ ವ್ಯಕ್ತಿಯ ಜಾತಕಕ್ಕೆ ಅದರದೇ ಆದ ಮಹತ್ವವಿದೆ. ಅವರವರ ಜಾತಕಕ್ಕನುಗುಣವಾಗಿ ಆ ಫಲಗಳನ್ನು ಜಾತಕನು ಈ ಜನ್ಮದಲ್ಲಿ ಅನುಭವಿಸುತ್ತಾನೆ. ಹಾಗಾಗಿ ಅವರವರ ಯೋಗಕ್ಕನುಗುಣವಾಗಿ ಉಂಟಾಗುವ ಫಲಗಳಲ್ಲಿ ಸನ್ಯಾಸವೂ ಒಂದು ಪ್ರಮುಖವಾದ ಯೋಗಫಲವಾಗಿದೆ.

webdunia
 
PR
ಸಾಮಾನ್ಯವಾಗಿ ನಾಲ್ಕು ಅಥವಾ ಐದು ಗ್ರಹಗಳು ಕೆಲವು ತ್ರಿಕೋಣದಲ್ಲಿ ಏಕತ್ರವಾಗಿ ಸೇರಿರುವಾಗ ಜಾತಕನು ಹುಟ್ಟಿದರೆ ಆ ಗ್ರಹಗಳಲ್ಲಿ ಯಾವ ಗ್ರಹವು ಬಲಿಷ್ಟವಾಗಿರುವುದೋ ಈ ಗ್ರಹಗಳ ಪ್ರಭಾವದಿಂದ ಸನ್ಯಾಸಾಶ್ರಮವನ್ನು ಸ್ವೀಕರಿಸುತ್ತಾರೆ. ಅಲ್ಲದೇ ಸೂರ್ಯ.ಶನಿ.ಗುರು.ಶುಕ್ರ.ಕುಜ.ಚಂದ್ರ.ಬುಧ ಈ ಏಳು ಗ್ರಹಗಳಿಂದ ಕ್ರಮವಾಗಿ ವಾನಪ್ರಸ್ಥ.ದಿಗಂಬರ.ಭಿಕ್ಷು.ವಿವಾಹ.ಶಾಕ್ಯ.ಗುರು,ಅಜೀವಕಗಳೆಂಬ ಏಳು ಬಗೆಯ ಪ್ರವ್ರಜ್ಯಾಬೇಧದಿಂದ ಆಶ್ರಮವನ್ನು ಸೇರುತ್ತಾರೆ ಎಂಬುದನ್ನು ಜ್ಯೋತಿಷ್ಯ ಶಾಸ್ತ್ರವು ತಿಳಿಸುತ್ತದೆ.

ಅಲ್ಲದೇ ಜಾತಕನು ಜನ್ಮಕಾಲದಲ್ಲಿ ಲಗ್ನದಿಂದ ಹತ್ತನೇ ಮನೆಯಾದ ಕರ್ಮಸ್ಥಾನದಲ್ಲಿ ಬಲಿಷ್ಠರಾದ ಮೂರು ಗ್ರಹಗಳು ತಾವು ಉಚ್ಚಸ್ಥಾನದಲ್ಲಿ ಮೂಲ ತ್ರಿಕೋಣ ಮೊದಲಾದ ಷಢ್ವರ್ಗದಲ್ಲಿದ್ದು, ಕರ್ಮಾಧಿಪತಿ ಇವೆಲ್ಲವುಗಳಿಂದ ಬಲಿಷ್ಟವಾಗಿದ್ದರೆ ಇಂತಹ ಸಮಯಗಳಲ್ಲಿ ಹುಟ್ಟಿದ ಜಾತಕನು ಸನ್ಯಾಸಿ ಅಗಲಿ ಅಥವಾ ಸನ್ಯಾಸಿಗಳು ಅಚರಿಸತಕ್ಕ ಆಚಾರ ನಿಷ್ಠನಾದರೂ ಆಗಿಯೇ ಆಗುತ್ತಾನೆ. ಅಲ್ಲದೇ ಈ ಯೋಗಕಾರಕಗಳಾದ ಗ್ರಹಗಳು ರವಿ.ಶನಿ.ಕುಜರನ್ನು ಸೇರಿಕೊಂಡಿದ್ದ ಪಕ್ಷದಲ್ಲಿ ದ್ರವ್ಯದ ಆಸೆಯಿಂದ ವಿಮುಖರಾಗಿ ಸನ್ಯಾಸಾಶ್ರಮವನ್ನು ಪ್ರವೇಶಿಸುತ್ತಾರೆ.

ಒಂದೊಮ್ಮೆ ಈ ಯೋಗಪರವಾದ ಗ್ರಹಗಳಲ್ಲಿ ಸೂರ್ಯನು ಸೌಮ್ಯ ಗ್ರಹಗಳ ನವಾಂಶದಲ್ಲಿದ್ದು ಬಾಲ್ಯಾವಸ್ಥೆಯಲ್ಲಿರುವ ಗ್ರಹವು ನೋಡಿದಲ್ಲಿ ಬಾಲ್ಯದಲ್ಲೂ, ಯೌವನಾವಸ್ಥೆಯಲ್ಲಿರುವ ಗ್ರಹವು ವೀಕ್ಷಿಸಿದ್ದರೆ ಯೌವನದಲ್ಲೂ, ಅಪರವಸ್ಥಾನ ಗ್ರಹವು ನೋಡಿದಲ್ಲಿ ಅಪರವಯಸ್ಸಿನಲ್ಲಿಯೂ ನಿಸ್ಸಂಶಯವಾಗಿ ಸನ್ಯಾಸ ಸ್ವೀಕರಿಸುತ್ತಾರೆ.

ಅಲ್ಲದೇ ಜಾತಕನ ಜಾತಕದಲ್ಲಿ ದಶಮಾಧಿಪತಿ ತ್ರಿಕೋಣಸ್ಥಾನ ಗತವಾಗಿ ನಾಲ್ಕು ಗ್ರಹಗಳಿಂದ ಕೂಡಿದ್ದಲ್ಲಿ, ಕೇಂದ್ರಸ್ಥಾನದಲ್ಲಿ ಚತುರ್ಗ್ರಹಯುಕ್ತನಾಗಿರುವ ಕಾಲದಲ್ಲಿ ಜನಿಸಿದವನು ಜೀವನ್ಮುಕ್ತನಾಗುವನು. ಅಲ್ಲದೇ ನಾಲ್ಕು ಗ್ರಹಗಳ ಕರ್ಮಸ್ಥಾನಗಳಲ್ಲಿದ್ದ ಸಮಯದಲ್ಲಿ ಜನಿಸಿದರೆ ಸನ್ಯಾಸವನ್ನು ಹೊಂದಿಯೇ ಹೊಂದುತ್ತಾನೆ.ವಿಶೇಷವೆಂದರೆ ಲಗ್ನದಿಂದ ಒಂಬತ್ತನೇ ಸ್ಥಾನದಲ್ಲಿ ಚಂದ್ರನಿದ್ದು ಯಾವುದೇ ಗ್ರಹಗಳಿಂದಲೂ ನೋಡಲ್ಪಡದಿದ್ದ ಪಕ್ಷದಲ್ಲಿ ರಾಜಯೋಗದಲ್ಲಿ ಹುಟ್ಟಿದವನಾದರೂ ಸಹ ಸನ್ಯಾಸ ಸ್ವೀಕಾರ ಮಾಡುತ್ತಾನೆ.

Share this Story:

Follow Webdunia kannada